ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ಕೊಟ್ಟಿದ್ದು ಒಳ್ಳೆಯದು: ಎಂಬಿಪಿ

ವಿಜಯಪುರ: ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ನೀಡಿರುವ ರಾಜೀನಾಮೆ ಸ್ವೀಕಾರ ಆಗಲಿಕ್ಕಿಲ್ಲ. ಆದರೆ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿದ್ದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

ಇಂದು ನಗರದಲ್ಲಿ ಮಾತನಾಡಿದ ಅವರು, ಎಲ್ಲಿಯವರೆಗೆ ಹೈಕಮಾಂಡ್ ರಾಜೀನಾಮೆ ಅಂಗೀಕರಿಸುವುದಿಲ್ಲವೋ ಅಲ್ಲಿಯವರೆಗೆ ಆ ಸ್ಥಾನಗಳು ಖಾಲಿ ಇಲ್ಲ. ಅವರಿಬ್ಬರ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ಪ್ರತಿಪಕ್ಷದ ನಾಯಕನ ಸ್ಥಾನ ಸದ್ಯಕ್ಕೆ ಖಾಲಿ ಇಲ್ಲ. ಹೀಗಾಗಿ ಆ ಸ್ಥಾನಗಳಿಗೆ ಆಕಾಂಕ್ಷಿ ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.

ಪಕ್ಷ ಬದಲಾವಣೆ ಬಯಸಿದಾಗ ಚರ್ಚೆ ನಡೆಸಿ ನಿರ್ಧರಿಸಲಾಗುತ್ತದೆ. ನಾನು ಆಕಾಂಕ್ಷಿ ಎಂದು ಚರ್ಚಿಸುವುದು ಸರಿಯಲ್ಲ ಎಂದು ಸಲಹೆ ನೀಡಿದರು. ಈಗ ಈ ರೀತಿ ಚರ್ಚಿಸುವುದರಿಂದ ಕೂಸು ಹುಟ್ಟುವ ಮುಂಚೆ ಕುಲಾಯಿ ಹೊಲಿಸಿದಂತೆ ಆಗುತ್ತದೆ ಎಂದರು.

ಪೌರತ್ವ ವಿಧೇಯಕ ಬಗ್ಗೆ ಏಕಾಏಕಿ ಈ ರೀತಿ ನಿರ್ಧಾರ ತಗೆದುಕೊಂಡಿದ್ದು ಸರಿಯಲ್ಲ. ಸಾರ್ವಜನಿಕವಾಗಿ ಚರ್ಚಿಸಿ ನಿರ್ಧರಿಸಬೇಕಿತ್ತು ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು. ಡಿಸಿಎಂಗಳ ಸಂಖ್ಯೆ ಹೆಚ್ಚಿಸುವುದಕ್ಕಿಂತ ಎಲ್ಲರನ್ನೂ ಡಿಸಿಎಂ ಮಾಡಿ ಬಿಡಲಿ ಎಂದು ಸಿಎಂ ಯಡ್ಡಿಯೂರಪ್ಪ ಅವರಿಗೆ ವ್ಯಂಗ್ಯವಾಡಿದರು. ಅಲ್ಲದೆ ಉಪಮುಖ್ಯಮಂತ್ರಿ ಹುದ್ದೆಯೇ ಸಂವಿಧಾನಿಕವೋ, ಅಸಂವಿಧಾನಿಕವೋ ಎಂಬುದು ಚರ್ಚೆಯಲ್ಲಿದೆ. ಲಿಂಗಾಯತ ಸ್ವತಂತ್ರ ಧರ್ಮ ಕುರಿತು ಆಂದೋಲ ಸಿದ್ದಲಿಂಗ ಸ್ವಾಮೀಜಿ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *