ತಿಳಿದು ತಿಳಿದು ನಾಟಕ ಮಾಡೋದನ್ನು ಬಿಡಿ – ಶೆಟ್ಟರ್‌ಗೆ ಎಂಬಿಪಿ ಟಾಂಗ್

ವಿಜಯಪುರ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ನಾಟಕ ಮಾಡುವುದನ್ನು ಬಿಡಬೇಕು ಎಂದು ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಟಾಂಗ್ ನೀಡಿದ್ದಾರೆ.

ಜಿಂದಾಲ್ ಜಮೀನು ಮಾರಾಟ ಪ್ರಕರಣದಲ್ಲಿ ಮೈತ್ರಿ ಸರ್ಕಾರವನ್ನು ಜಗದೀಶ್ ಶೆಟ್ಟರ್ ಡೀಲ್ ಸರ್ಕಾರ ಎಂದು ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಎಂ.ಬಿ ಪಾಟೀಲ್ ಅವರು ತಿಳಿದು ತಿಳಿದು ನಾಟಕ ಮಾಡುವುದನ್ನು ಶೆಟ್ಟರ್ ಬಿಡಬೇಕು ಎಂದು ಹೇಳಿದ್ದಾರೆ.

ಒಂದು ಎಕರೆಗೆ 1.20 ಲಕ್ಷ ಕಡಿಮೆ ನೀಡುವ ಪ್ರಶ್ನೆ ಬರುವುದಿಲ್ಲ. ಹಿಂದಿನ ಮಾರುಕಟ್ಟೆಯಲ್ಲಿರುವ ಬೆಲೆಯನ್ನು ಜಿಂದಾಲ್ ಅವರು ಕಟ್ಟಿದ್ದಾರೆ. ಜಗದೀಶ್ ಶೆಟ್ಟರ್ ಈ ವಿಚಾರದಲ್ಲಿ ರಾಜಕಾರಣ ಮಾಡುವುದನ್ನು ಬಿಡಬೇಕು. ತಿಳಿದು ತಿಳಿದು ನಾಟಕ ಮಾಡಬಾರದು. ನಮ್ಮ ರಾಜ್ಯದ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಲು ನಾವು ಈ ನಿರ್ಧಾರ ಮಾಡಿದ್ದೇವೆ. ಈ ವಿಚಾರದಲ್ಲಿ ಬೇಜವಾಬ್ದಾರಿಯುತವಾಗಿ ಮಾತನಾಡಬಾರದು ಎಂದು ಶೆಟ್ಟರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಪೊಲೀಸರ ವೇತನವನ್ನು ಶೇ.30 ಏರಿಕೆ ಮಾಡುವಂತೆ ಹಿರಿಯ ಐಪಿಎಸ್ ಅಧಿಕಾರಿ ರಾಘವೇಂದ್ರ ಔರಾದ್ಕರ್ ನೇತೃತ್ವದ ಸಮಿತಿ ಸಲ್ಲಿಸಿರುವ ಶಿಫಾರಸ್ಸು ವರದಿ ಜಾರಿ ವಿಚಾರದ ಬಗ್ಗೆ ಕೇಳಿದಾಗ, ಜೂನ್ 10 ಸಂಜೆ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆಯನ್ನು ನಿಗದಿ ಮಾಡಲಾಗಿದೆ. ಔರಾದ್ಕರ್ ವರದಿ ಬಗ್ಗೆ ಸಮಗ್ರ ಚರ್ಚೆ ಮಾಡಲಾಗುವುದು.

ಇದೇ ಸಭೆಯಲ್ಲಿ ಪೊಲೀಸ್ ಇಲಾಖೆಯ ರಜೆ ಕಡಿತ ಆಗಿರುವ ಬಗ್ಗೆ ಚರ್ಚೆ ಮಾಡಲಾಗುವುದು ಯಾವ ಪೊಲೀಸರು ಆತಂಕ ಪಡಬಾರದು. ಪೊಲೀಸ್ ಇಲಾಖೆಯ ಬಗ್ಗೆ ಹೆಮ್ಮೆ ಪಡುವ ಗೃಹ ಸಚಿವ ನಾನು. ಪೊಲೀಸರು ಬಹಳ ಕಷ್ಟದಿಂದ ದುಡಿಯುತ್ತಾರೆ. ಪೊಲೀಸರ ಬಗ್ಗೆ ನನಗೆ ಹೆಮ್ಮೆ ಇದೆ. ಸಿಎಂ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪೊಲೀಸರಿಗೆ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

Comments

Leave a Reply

Your email address will not be published. Required fields are marked *