ಮೋದಿ, ಬಿಎಸ್‍ವೈ ದೇಶ ವಿರೋಧಿಗಳು: ಕಾಶಪ್ಪನವರ್

ಬಾಗಲಕೋಟೆ: ಟಿಪ್ಪು ಸುಲ್ತಾನ್ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರೇ ದೇಶದ ವಿರೋಧಿಗಳು ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಜಿಲ್ಲೆಯ ಹುನಗುಂದ ಪಟ್ಟಣದಲ್ಲಿ ನಡೆದ ಪೌರತ್ವ ಕಾಯ್ದೆ ವಿರುದ್ಧದ ಪ್ರತಿಭಟನೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ನೋಡಲು ತಾಜ್‍ಮಹಲ್, ಗೋಳಗುಮ್ಮಟ, ಚಾರ್‍ಮಿನಾರ್ ಬೇಕು. ಟಿಪ್ಪು ಏಕೆ ಬೇಡ ಎಂದು ಪ್ರಶ್ನಿಸಿದರು. ಟಿಪ್ಪು ಸೋಲ್ ಆಫ್ ಮೈಸೂರು, ಕಿಂಗ್ ಆಫ್ ಕರ್ನಾಟಕ ಎಂದು ಹೊಗಳಿದರು.

ಗಣರಾಜ್ಯೋತ್ಸವದ ದಿನ ಪ್ರಧಾನಿ ಮೋದಿ ಕೆಂಪು ಕೋಟೆಯಲ್ಲಿ ಮತ್ತೆ ಭಾಷಣ ಮಾಡುತ್ತಾರೆ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಹೇಳುತ್ತಾರೆ. ಎಲ್ಲಿದೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ ಎಂದು ವ್ಯಂಗ್ಯವಾಡಿದರು. ಟಿಪ್ಪು ಸುಲ್ತಾನ್ ಜಯಂತಿ ಸಂದರ್ಭದಲ್ಲಿ ಈ ಹಿಂದೆ ಬಿಎಸ್‍ವೈ ಟಿಪ್ಪು ಸುಲ್ತಾನ್ ಉಡುಗೆ ತೊಟ್ಟಿದ್ದರು. ಅಲ್ಲದೆ ಅವರ ಖಡ್ಗ ಹಿಡಿದು ಪೋಸ್ ಕೊಟ್ಟಿದ್ದರು. ಆದರೆ ಬಿಎಸ್‍ವೈ ಎರಡೇ ವರ್ಷಕ್ಕೆ ಬದಲಾದರು. ಟಿಪ್ಪು ಸುಲ್ತಾನ್ ಜಯಂತಿ ಬೇಡ ಎಂದು ಟೀಕಿಸಿದರು ಎಂದು ಹರಿಹಾಯ್ದರು.

ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡುತ್ತೀರಿ, ಆದರೆ ಟಿಪ್ಪು ಸುಲ್ತಾನ್ ಜಯಂತಿ ಬೇಡ ಎನ್ನುತ್ತೀರಿ. ಟಿಪ್ಪು ದೇಶಕ್ಕಾಗಿ ಅಪಾರ ಕೊಡುಗೆ ನೀಡಿದ್ದಾನೆ. ದೇಶ ರಕ್ಷಣೆಗಾಗಿ ತಮ್ಮ ಮಕ್ಕಳನ್ನೇ ತ್ಯಾಗ ಮಾಡಿದ್ದ. ದೇಶ ರಕ್ಷಣೆಗಾಗಿ ಮಕ್ಕಳನ್ನ ತ್ಯಾಗ ಮಾಡಿದವರು ಯಾರಾದರೂ ಇದ್ದರೆ ಅದು ಟಿಪ್ಪು ಸುಲ್ತಾನ್ ಮಾತ್ರ ಎಂದು ಹೆಮ್ಮೆಯಿಂದ ಹೇಳುತ್ತೇನೆ. ರಾಷ್ಟ ಧ್ವಜದ ಬಣ್ಣ ಕೆಸರಿ, ಬಿಳಿ, ಹಸಿರಿನಿಂದ ಕೂಡಿದೆ. ಕೇಸರಿ ಸಂಕೇತ ತ್ಯಾಗ. ಆದರೆ ಮೋದಿ ದೇಶವನ್ನು ಕೇಸರೀಕರಣ ಮಾಡಲು ಹೊರಟಿದ್ದು, ಇದು ಎಂದೆಂದಿಗೂ ಸಾಧ್ಯವಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *