ವಿಚಾರಣೆಗೆ ಹಾಜರಾಗಿ: ಸುಪ್ರೀಂನಿಂದ ಲಂಡನ್‍ನಲ್ಲಿರೋ ಮಲ್ಯಗೆ ಸಮನ್ಸ್

ನವದೆಹಲಿ: ನ್ಯಾಯಾಂಗ ನಿಂದನೆ ಹಿನ್ನಲೆಯಲ್ಲಿ ವಿಜಯ್ ಮಲ್ಯಗೆ ಸುಪ್ರೀಂ ಕೋರ್ಟ್ ಸಮನ್ಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

9 ಸಾವಿರ ಕೋಟಿ ರೂ. ಬ್ಯಾಂಕ್ ಸಾಲ ಪ್ರಕರಣದಲ್ಲಿ ಆದೇಶವನ್ನು ಉಲ್ಲಂಘಿಸಿದ್ದಕ್ಕೆ ತಪ್ಪಿತಸ್ಥ ಎಂದು ಪರಿಗಣಿಸಿದ ಸುಪ್ರೀಂ ಕೋರ್ಟ್ ಜುಲೈ 10ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಲಂಡನ್‍ನಲ್ಲಿರೋ ಮಲ್ಯಗೆ ಸಮನ್ಸ್ ಜಾರಿ ಮಾಡಿದೆ.

ಮಲ್ಯರನ್ನು ಲಂಡನ್‍ನಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿರುವ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ ಮಧ್ಯಪ್ರವೇಶದಿಂದ ಮತ್ತಷ್ಟು ಪುಷ್ಠಿ ಸಿಕ್ಕಂತಾಗಿದೆ. ಒಂದು ವೇಳೆ ಜುಲೈ 10 ರಂದು ವಿಚಾರಣೆಗೆ ಹಾಜರಾಗದಿದ್ದರೆ ವಿಜಯ್ ಮಲ್ಯ ವಿರುದ್ಧ ಯಾವುದೇ ರೀತಿಯ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್‍ಗೆ ಅಧಿಕಾರವಿದೆ. ಮಲ್ಯಗೆ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸುವ ಸಾಧ್ಯತೆ ಇದೆ.

ಮಲ್ಯರಿಂದ 9 ಸಾವಿರ ಕೋಟಿ ರೂ. ಸಾಲ ಹಿಂಪಡೆಯಲು ಯತ್ನಿಸುತ್ತಿರುವ ಬ್ಯಾಂಕ್‍ಗಳ ಒಕ್ಕೂಟ ನ್ಯಾಯಾಂಗ ನಿಂದನೆ ಅರ್ಜಿಯನ್ನ ಸಲ್ಲಿಸಿತ್ತು. ಮಲ್ಯ ಡಿಯಾಜಿಯೋ ಕಂಪೆನಿಯಿಂದ ಸುಮಾರು 258 ಕೋಟಿ ರೂ.(40 ಮಿಲಿಯನ್ ಡಾಲರ್) ಪಡೆದಿದ್ದಾರೆ. ಆದ್ರೆ ಈ ಹಣದಲ್ಲಿ ಸಾಲ ತೀರಿಸುವ ಬದಲು ತಮ್ಮ ಮಕ್ಕಳ ಬ್ಯಾಂಕ್ ಖಾತೆಗೆ ವರ್ಗಾಯಿಸಿ ನ್ಯಾಯಾಲಯದ ಆದೇಶಗಳ ಉಲ್ಲಂಘನೆ ಮಾಡಿದ್ದಾರೆಂದು ಅರ್ಜಿಯಲ್ಲಿ ಆರೋಪಿಸಿತ್ತು.

ಕಳೆದ ತಿಂಗಳು ಮಲ್ಯರನ್ನ ಲಂಡನ್‍ನಲ್ಲಿ ಬಂಧಿಸಲಾಗಿತ್ತು. ಆದ್ರೆ ಬಂಧನವಾದ ಮೂರೇ ಗಂಟೆಗಳಲ್ಲಿ ಮಲ್ಯ ಜಾಮೀನು ಪಡೆದು ಹೊರಬಂದಿದ್ರು.

Comments

Leave a Reply

Your email address will not be published. Required fields are marked *