ಹಜಾರೆ ಟ್ರೋಫಿಯಲ್ಲಿ ಆರ್.ಅಶ್ವಿನ್ ಎಡವಟ್ಟು- ಮ್ಯಾಚ್ ರೆಫ್ರಿಯಿಂದ ದಂಡ

ಬೆಂಗಳೂರು: ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ ಎಡವಟ್ಟು ಮಾಡಿಕೊಂಡಿದ್ದು, ಮ್ಯಾಚ್ ರೆಫ್ರಿ ದಂಡ ವಿಧಿಸಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಕರ್ನಾಟಕ ತಂಡದ ವಿರುದ್ಧದ ಫೈನಲ್ ಪಂದ್ಯದಲ್ಲಿ ತಮಿಳುನಾಡು ಪರ ಆರ್.ಅಶ್ವಿನ್ 3ನೇ ಕ್ರಮಾಂಕದಲ್ಲಿ ಮೈದಾನಕ್ಕೆ ಇಳಿದಿದ್ದರು. ಇದು ಕ್ರಿಕೆಟ್ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿತ್ತು. ಆದರೆ 13 ಎಸೆತಗಳನ್ನು ಎದುರಿಸಿದ ಆರ್.ಅಶ್ವಿನ್ 8 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಆರ್.ಅಶ್ವಿನ್ ಬಿಸಿಸಿಐ ಲೋಗೋ ಇದ್ದ ಹೆಲ್ಮೆಟ್ ಧರಿಸಿ ಮೈದಾನಕ್ಕೆ ಇಳಿದಿದ್ದರು. ಆದರೆ ನಿಯಮದಂತೆ ದೇಶಿ ಕ್ರಿಕೆಟ್‍ನಲ್ಲಿ ಬಿಸಿಸಿಐ ಲೋಗೋ ಇರುವ ಸಮವಸ್ತ್ರವನ್ನು ಧರಿಸುವಂತಿಲ್ಲ. ಇದನ್ನು ಗಮನಿಸಿದ ಮ್ಯಾಚ್ ರೆಫ್ರಿ ಚಿನ್ಮಯ್ ಶರ್ಮಾ, ನಿಯಮ ಉಲ್ಲಂಘಿಸಿದ ಆರ್.ಅಶ್ವಿನ್ ಅವರಿಗೆ ದಂಡ ವಿಧಿಸಿದ್ದಾರೆ.

ಇದೇ ಪಂದ್ಯದಲ್ಲಿ ಕರ್ನಾಟಕ ತಂಡದ ಮಯಾಂಕ್ ಅಗರ್ವಾಲ್ ಬಿಸಿಸಿಐ ಲೋಗೋ ಇದ್ದ ಹೆಲ್ಮೆಟ್‍ಗೆ ಟೇಪ್ ಅಂಟಿಸಿ ಮೈದಾನಕ್ಕೆ ಇಳಿದಿದ್ದರು. ಇತ್ತ ಕೆ.ಎಲ್.ರಾಹುಲ್ ಯಾವುದೇ ಲೋಗೋ ಇಲ್ಲದ ಸಾಮಾನ್ಯ ಹೆಲ್ಮೆಟ್ ಧರಿಸಿದ್ದರು.

ಅಭಿಮನ್ಯು ಮಿಥುನ್ ಹ್ಯಾಟ್ರಿಕ್ ಸಾಧನೆಯಿಂದಾಗಿ ಕರ್ನಾಟಕ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ವಿಜೆಡಿ ನಿಯಮದ ಅನ್ವಯ 60 ರನ್‍ಗಳಿಂದ ತಮಿಳುನಾಡು ತಂಡವನ್ನು ಸೋಲಿಸುವ ಮೂಲಕ ಕರ್ನಾಟಕ 4ನೇ ಬಾರಿ ಟ್ರೋಫಿಯನ್ನು ಗೆದ್ದುಕೊಂಡಿದೆ.

ಟಾಸ್ ಸೋತು ಬ್ಯಾಟ್ ಮಾಡಿದ ತಮಿಳುನಾಡು 49.5 ಓವರ್ ಗಳಲ್ಲಿ 252 ರನ್‍ಗಳಿಗೆ ಆಲೌಟ್ ಆಯ್ತು. ಈ ಮೊತ್ತವನ್ನು ಬೆನ್ನಟ್ಟುವ ಸಂದರ್ಭದಲ್ಲಿ 23 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 141 ರನ್‍ಗಳಿಸಿದಾಗ ಜೋರಾಗಿ ಮಳೆ ಸುರಿಯಲು ಆರಂಭವಾಯಿತು. ಮಳೆ ನಿಲ್ಲದ ಪರಿಣಾಮ ವಿ.ಜಯದೇವನ್ ಮಾದರಿ ಅಥವಾ ವಿಜೆಡಿ ನಿಯಮದ ಅನ್ವಯ ಕರ್ನಾಟಕ 60 ರನ್ ಗಳಿಂದ ಗೆದ್ದುಕೊಂಡಿದೆ ಎಂದು ಪ್ರಕಟಿಸಲಾಯಿತು.

ಮಿಥುನ್ ದಾಖಲೆ: ವಿಜಯ್ ಹಜಾರೆ ಟ್ರೋಫಿ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ‘ಪಿಣ್ಯ ಎಕ್ಸ್ ಪ್ರೆಸ್’ ಅಭಿಮನ್ಯು ಮಿಥುನ್ ದಾಖಲೆ ಬರೆದಿದ್ದಾರೆ. ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಅಭಿಮನ್ಯು ಮಿಥುನ್ ಪಾತ್ರರಾಗಿದ್ದಾರೆ. ವಿಶೇಷ ಏನೆಂದರೆ ಹುಟ್ಟು ಹಬ್ಬದ ದಿನವೇ ಹ್ಯಾಟ್ರಿಕ್ ವಿಕೆಟ್ ಸಾಧನೆ ಜೊತೆಗೆ ಐದು ವಿಕೆಟ್ ಉರುಳಿಸಿ ಅವಿಸ್ಮರಣೀಯ ಕ್ಷಣವನ್ನು ತಮ್ಮದಾಗಿಸಿಕೊಂಡಿದ್ದಾರೆ.

9.5 ಓವರ್ ಎಸೆದ ಅಭಿಮನ್ಯು ಮಿಥುನ್ 34 ರನ್ ನೀಡಿ 5 ವಿಕೆಟ್ ಪಡೆದಿದ್ದಕ್ಕೆ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2013, 2014, 2017 ರಲ್ಲಿ ಕರ್ನಾಟಕ ವಿಜಯ್ ಹಜಾರೆ ಟ್ರೋಫಿಯನ್ನು ಗೆದ್ದುಕೊಂಡಿತ್ತು.

Comments

Leave a Reply

Your email address will not be published. Required fields are marked *