ಯತ್ನಾಳ್ ಸತ್ಯ ಹೇಳ್ತಾರೆ, ಅವ್ರು ನನಗೆ ಒಳ್ಳೆ ಸ್ನೇಹಿತ: ಸಿದ್ದರಾಮಯ್ಯ

– ಯಡಿಯೂರಪ್ಪಗೆ ಡಿಸಿಎಂಗಳು ಯಾರು ಅನ್ನೋದೇ ಗೊತ್ತಿಲ್ಲ
– ಬಿಎಸ್‍ವೈ ಹೈಕಮಾಂಡ್‍ಗೆ ಒಲ್ಲದ ಶಿಶು

ಬೆಂಗಳೂರು: ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಧಿವೇಶನದ ಮೊದಲ ದಿನವೇ ಬಿಜೆಪಿ ನಾಯಕರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಭರ್ಜರಿ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮಾತಿನ ದಾಟಿಯ ಮೂಲಕವೇ ಬಿಜೆಪಿಯಲ್ಲಿ ಕಾಣಿಸಿಕೊಂಡ ಭಿನ್ನಮತ ಹಾಗೂ ಅಸಮಾಧಾನವನ್ನು ಕೆಣಕಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸತ್ಯ ಹೇಳುತ್ತಾರೆ. ಅವರು ನನಗೆ ಒಳ್ಳೆ ಸ್ನೇಹಿತ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಅಧಿಕಾರದಿಂದ ತೆಗೆಯುವುದಕ್ಕೆ ಇಬ್ಬರು ಕೇಂದ್ರ ಸಚಿವರು ಹೊರಟಿದ್ದಾರೆ ಅಂತ ಯತ್ನಾಳ್ ಹೇಳಿದ್ದಾರೆ. ಪಾಪ ಯತ್ನಾಳ್ ಸತ್ಯ ಹೇಳಿದ್ದಾರೆ. ಅವರ ಸತ್ಯ ಬೇರೆಯವರಿಗೆ ಕಹಿ. ಡೋಂಟ್ ವರಿ ಮಿಸ್ಟರ್ ಯತ್ನಾಳ್ ಎಂದು ಕಾಲೆಳೆದರು.

ಸಿಎಂ ಯಡಿಯೂರಪ್ಪ ಅವರಿಗೆ ಯಾರು ಉಪ ಮುಖ್ಯಮಂತ್ರಿಗಳು ಎನ್ನುವುದೇ ಗೊತ್ತಿಲ್ಲ. ನಾನು ಹೇಳುತ್ತೇನೆ ಕೇಳಿ, ಒಬ್ಬರು ಸೋತವರು, ಮತ್ತೊಬ್ಬರು ಮೊದಲ ಬಾರಿಗೆ ಸಚಿವರಾದವರು. ಗೋವಿಂದ ಕಾರಜೋಳ ಡಿಸಿಎಂ ಅಂತ ನಾನು ಒಪ್ಪುತ್ತೇನೆ. ಬಿ.ಎಸ್.ಯಡಿಯೂರಪ್ಪ ಸೂಚಿಸಿದ ಒಂದಿಬ್ಬರು ಸಚಿವರಾಗಿದ್ದಾರೆ ಅಷ್ಟೇ. ಉಳಿದವರು ಹೈಕಮಾಂಡ್ ಆದೇಶದಿಂದಾದ ಸಚಿವರು ಎಂದು ವ್ಯಂಗ್ಯವಾಡಿದರು.

ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ನನಗೆ ಪ್ರೀತಿ ಇದೆ. ಅಷ್ಟೇ ಯಾಕೆ ಅನುಕಂಪವೂ ಇದೆ. ಆದರೆ ಅವರು ಹೈಕಮಾಂಡ್‍ಗೆ ಒಲ್ಲದ ಶಿಶು. ಈ ಮಾತುಗಳು ಯಡಿಯೂರಪ್ಪ ಅವರಿಗೆ ಬೇಜಾರ್ ಆಗಬಹುದು. ಆದರೆ ಏನ್ ಮಾಡೋದು ಬಿಎಸ್‍ವೈಗೆ ಬಿಜೆಪಿ ಹೈಕಮಾಂಡ್ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದಾಗ ಪೂರ್ಣ ಸ್ವಾತಂತ್ರ್ಯ ಇತ್ತು. ಕ್ಯಾಬಿನೆಟ್ ರಚನೆಗೆ ಸ್ವತಂತ್ರ ಇತ್ತು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯ ಪ್ರವೇಶ ಮಾಡಿರಲಿಲ್ಲ ಎಂದು ಕುಟುಕಿದರು.

ಬಿ.ಎಸ್.ಯಡಿಯೂರಪ್ಪ ಅವರು ಜುಲೈ 26 ರಿಂದ ಆಗಸ್ಟ್ 20ರವರೆಗೆ ಒಬ್ಬರೇ ಸಿಎಂ ಆಗಿದ್ದರು. ಹಾಗಾಗಿ ಪಾಪ ಯಡಿಯೂರಪ್ಪ ಬಗ್ಗೆ ಅನುಕಂಪ ಇದೆ. ಬಳಿಕ ಬಂದ ಉಪ ಮುಖ್ಯಮಂತ್ರಿಗಳು ಯಾರು ಎನ್ನುವುದೇ ಅವರಿಗೆ ಗೊತ್ತಿಲ್ಲ ಎಂದು ಹೇಳಿದರು.

Comments

Leave a Reply

Your email address will not be published. Required fields are marked *