ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದ್ದಕ್ಕೆ ಕಾಲೇಜಿನಲ್ಲೇ ಥಳಿಸಿದ- ಟಿಎಂಸಿ ಕಾರ್ಯಕರ್ತನ ಗೂಂಡಾಗಿರಿ ನೋಡಿ

ಕೋಲ್ಕತ್ತಾ: ಕಾಲೇಜಿನಲ್ಲೇ ಯುವತಿಯನ್ನು ಥಳಿಸಿ, ಲೈಂಗಿಕ ಕಿರುಕುಳ ನೀಡಿದ ಕಾರ್ಯಕರ್ತನನ್ನು ತೃಣಮೂಲ ಕಾಂಗ್ರೆಸ್ ಪಕ್ಷದಿಂದ ವಜಾಗೊಳಿಸಿದೆ.

ಹೂಗ್ಲಿ ಜಿಲ್ಲೆಯಲ್ಲಿ ರಿಶ್ರಾದಲ್ಲಿರುವ ಬೀದನ್ ಚಂದ್ರ ಕಾಲೇಜಿನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಹಸನ್ ಖಾನ್ ಕೃತ್ಯ ಎಸಗಿದ ಆರೋಪಿ. ಹಸನ್ ಖಾನ್ ವಿದ್ಯಾರ್ಥಿನಿಯ ಜೊತೆ ದೈಹಿಕ ಸಂಪರ್ಕಕ್ಕೆ ಸಹಕರಿಸುವಂತೆ ಕೇಳಿದ್ದಾನೆ. ಅದಕ್ಕೆ ಆಕೆ ನಿರಾಕರಿಸಿದ್ದಾಗ ಆತ ಯುವತಿಯನ್ನು ವಿದ್ಯಾರ್ಥಿ ಸಂಘದ ಕಚೇರಿಗೆ ಕರೆದುಕೊಂಡು ಹೋಗಿ ಆಕೆಯ ಮೇಲೆ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡಿದ್ದಾನೆ.

ಮಾಧ್ಯಮಗಳಿಗೆ ಸಂತ್ರಸ್ತೆ ಪ್ರತಿಕ್ರಿಯಿಸಿ, ನನ್ನನ್ನು ವಿದ್ಯಾರ್ಥಿ ಸಂಘದ ಕಚೇರಿಗೆ ಕರೆದುಕೊಂಡು ಹೋಗಿ, ನಾನು ಯಾರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದೆ ಎನ್ನುವುದನ್ನು ತಿಳಿಯಲು ನನ್ನ ಫೋನ್ ಕೇಳುತ್ತಿದ್ದನು. ಅಷ್ಟೇ ಅಲ್ಲದೆ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸು ಎಂದು ಹೇಳುತ್ತಿದ್ದನು. ಆದರೆ ನಾನು ಇದನ್ನು ನಿರಾಕರಿಸಿದೆ. ಆಗ ಅವನು ನನ್ನ ಮೇಲೆ ಹಲ್ಲೆ ನಡೆಸಿ, ಥಳಿಸುತ್ತಿದ್ದನು ಎಂದು ಹೇಳಿದ್ದಾಳೆ.

ಈ ಘಟನೆಯಿಂದ ನನಗೆ ಕಾಲೇಜಿಗೆ ಹೋಗಲು ಹೆದರಿಕೆಯಾಗುತ್ತಿದೆ. ಆತ ನನ್ನನ್ನು ಹಾಗೂ ನನ್ನ ಕುಟುಂಬದವರನ್ನು ಕೊಲ್ಲುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ನಾನು ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ ಎಂದು ಯುವತಿ ತಿಳಿಸಿದ್ದಾಳೆ.

ಈ ಘಟನೆಯ ಸಿಸಿಟಿವಿ ದೃಶ್ಯಾವಳಿ ಹೊರಬರುತ್ತಿದ್ದಂತೆಯೇ ಕಾಲೇಜು ಆಡಳಿತ ಮಂಡಳಿ ತನಿಖಾ ತಂಡವನ್ನು ರಚಿಸಿದೆ. ಈ ಘಟನೆಯನ್ನು ಖಂಡಿಸಿ, ಟಿಎಂಸಿ ಚಾತ್ರಾ ಪರಿಶದ್ ಆರೋಪಿಯಾಗಿರುವ ಹಸನ್ ಖಾನ್ ಪಕ್ಷದಿಂದ ವಜಾಗೊಳಿಸಿದೆ.

ಈ ನಡವಳಿಕೆಯನ್ನು ನಮ್ಮ ಪಕ್ಷ ಸಹಿಸುವುದಿಲ್ಲ. ಯುವತಿಯ ರಕ್ಷಣೆ ನಮ್ಮದು ಎಂದು ನಾವು ಭರವಸೆ ನೀಡುತ್ತೇವೆ ಎಂದು ಟಿಎಂಸಿಯ ಚಾತ್ರಾ ಪರಿಶದ್ ನ ಮುಖ್ಯ ಕಾರ್ಯದರ್ಶಿಯಾದ ಜಯದತ್ತ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *