ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ – ಸಚಿವ ನಾಗೇಂದ್ರ ತಲೆದಂಡಕ್ಕೆ ವಿಜಯೇಂದ್ರ ಆಗ್ರಹ!

– ವಾಲ್ಮೀಕಿ ನಿಗಮ ಭ್ರಷ್ಟಾಚಾರ ಕೇಸ್‌ ಸಿಬಿಐಗೆ ವಹಿಸಲು ಬಿಗಿ ಪಟ್ಟು

ಬೆಂಗಳೂರು: ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣದಲ್ಲಿ (Valmiki Corporation Corruption Scam) ಸಚಿವ ನಾಗೇಂದ್ರ ತಲೆದಂಡಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸೇರಿದಂತೆ ಹಿರಿಯ ನಾಯಕರು ಒತ್ತಾಯಿಸಿದ್ದಾರೆ. ಅಲ್ಲದೇ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಬಿಗಿಪಟ್ಟು ಹಿಡಿದಿದ್ದಾರೆ. ಈ ಸಂಬಂಧ ವಿಜಯೇಂದ್ರ (BY Vijayendra) ತಮ್ಮ ಎಕ್ಸ್‌ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ವಿಜೇಂದ್ರ ಎಕ್ಸ್‌ ಖಾತೆಯಲ್ಲಿ ಏನಿದೆ?
ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ಪ್ರಕರಣವನ್ನು ದಿಕ್ಕು ತಪ್ಪಿಸಿ ಭ್ರಷ್ಟರನ್ನು ರಕ್ಷಿಸುವ ಉದ್ದೇಶದಿಂದ ಎಸ್ಐಟಿ ರಚನೆ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್‌ ಸರ್ಕಾರ ಆರೋಪಿತರನ್ನು ರಕ್ಷಿಸಲು ಹೊರಟಿದೆ. ಎಸ್.ಐ.ಟಿ ರಚನೆ ಕೇವಲ ಕಣ್ಣೊರೆಸುವ ತಂತ್ರವಾಗಿದ್ದು ಇದನ್ನು ಭಾರತೀಯ ಜನತಾ ಪಾರ್ಟಿಯು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ.

ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿ ಚಂದ್ರಶೇಖರ್ ಅವರು ಸಾವಿಗೂ ಮುನ್ನ ಬರೆದ ಡೆತ್ ನೋಟ್ ನಲ್ಲಿ ಈಗಾಗಲೇ ಉಲ್ಲೇಖವಾಗಿರುವಂತೆ ಸ್ವತಃ ಸಚಿವ ಬಿ.ಎನ್‌ ನಾಗೇಂದ್ರ ಹೆಸರಿರುವುದು ಬಹಿರಂಗವಾಗಿದೆ. ಈ ನಿಟ್ಟಿನಲ್ಲಿ ಅವರನ್ನು ಈಗಾಗಲೇ ಸಂಪುಟದಿಂದ ಮುಖ್ಯಮಂತ್ರಿಗಳು ವಜಾಗೊಳಿಸಬೇಕಿತ್ತು ಆದರೆ ಈವರೆಗೂ ಆರೋಪ ಹೊತ್ತವರನ್ನು ಅವ್ಯವಹಾರದ ಜಾಲದಿಂದ ರಕ್ಷಿಸುವ ಪ್ರಯತ್ನ ನಡೆಯುತ್ತಿದೆ.

ಪರಿಶಿಷ್ಟ ಪಂಗಡದ ಹಿತಾಸಕ್ತಿಗೆ ದ್ರೋಹ ಬಗೆದು ಹಣ ದುರುಪಯೋಗ ಮಾಡಿಕೊಂಡಿರುವುದರ ವಿರುದ್ಧ ಹಾಗೂ ಅಮೂಲ್ಯ ಜೀವವೊಂದು ಆತ್ಮಹತ್ಯೆಗೆ ಈಡಾಗಿರುವುದರ ಕುರಿತು ಈ ಸರ್ಕಾರ ಎಳ್ಳಷ್ಟೂ ತಲೆ ಕೆಡಿಸಿಕೊಳ್ಳದೆ, ಯೂನಿಯನ್ ಬ್ಯಾಂಕ್ ಮೇಲೆ ಗೂಬೆ ಕೂರಿಸಲು ಹೊರಟಿದೆ. ಸದ್ಯ ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿನ್ನೆಲೆಯಲ್ಲಿ ಗತ್ಯಂತರವಿಲ್ಲದೇ ಎಸ್ಐಟಿ ರಚಿಸಿ ಜನರ ಕಣ್ಣಿಗೆ ಮಣ್ಣೆರಚಲು ಹೊರಟಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಂತರಾಜ್ಯ ವ್ಯಾಪ್ತಿಯಲ್ಲಿ ದುರುಪಯೋಗವಾಗಿರುವ ಹಿನ್ನೆಲೆಯಲ್ಲಿ ಈ ಪ್ರಕರಣ ಸರ್ಕಾರದ ಬಹುದೊಡ್ಡ ಹಗರಣವಾಗಿದ್ದು, ಈ ಬಗ್ಗೆ ಸಿಬಿಐ ತನಿಖೆ ಹೊರತುಪಡಿಸಿ ಇನ್ಯಾವ ಬಗೆಯ ತನಿಖೆಯನ್ನು ರಾಜ್ಯ ಬಿಜೆಪಿ ಒಪ್ಪುವುದಿಲ್ಲ, ಸಿಬಿಐ ತನಿಖೆಯ ಬೇಡಿಕೆಗೆ ಸರ್ಕಾರ ಒಪ್ಪುವವರೆಗೂ, ಆರೋಪಿತ ಸಚಿವ ಬಿ.ನಾಗೇಂದ್ರ ಸ್ಥಾನ ತೆರವಾಗಿ ಅವರಿಗೆ ತಕ್ಕ ಶಿಕ್ಷೆಯಾಗುವವರೆಗೂ ತಾರ್ಕಿಕ ಅಂತ್ಯಕ್ಕೆ ನಾವು ಹೋರಾಟವನ್ನು ಕೊಂಡೊಯ್ಯಲಿದ್ದೇವೆ ಎಂದು ಎಚ್ಚರಿಸಿದ್ದಾರೆ.