ಕಳ್ಳಾಟ ಆಡಿದ್ರೆ ಬಂಧೀಖಾನೆ ನೋಡೋಕೆ ಕಳಿಸ್ತೀನಿ- ಅಧಿಕಾರಿಗೆ ಸೋಮಣ್ಣ ಕ್ಲಾಸ್

ಮೈಸೂರು: ಸರಿಯಾಗಿ ಕೆಲಸ ಮಾಡದಿದ್ದರೆ ಬಂಧೀಖಾನೆ ಹೇಗಿದೆ ಅಂತ ನೋಡೋಕೆ ಕಳುಹಿಸುತ್ತೇನೆ ಎಂದು ರೇಷ್ಮೆ ಸಚಿವ ವಿ. ಸೋಮಣ್ಣ ಅವರು ಕೆಎಸ್‌ಐಸಿ ಜನರಲ್ ಮ್ಯಾನೇಜರ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮೈಸೂರಿನ ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಲಿಮಿಟೆಡ್‌ಗೆ(ಕೆಎಸ್‌ಐಸಿ) ಸಚಿವ ಸೋಮಣ್ಣ, ಸಂಸದ ಪ್ರತಾಪ್ ಸಿಂಹ ಅವರು ಭೇಟಿ ಕೊಟ್ಟಿದ್ದರು. ಈ ವೇಳೆ ಅಲ್ಲಿನ ಅವ್ಯವಸ್ಥೆ, ನೌಕಕರರ ಸಮಸ್ಯೆ ಕೇಳಿ ಸೋಮಣ್ಣ ಅವರು ಸಿಟ್ಟಾದರು. ನೌಕರರ ಮುಂದೆಯೇ ಜನರಲ್ ಮ್ಯಾನೇಜರ್ ಕೃಷ್ಣ ಅವರನ್ನು ತರಾಟೆಗೆ ತೆಗೆದುಕೊಂಡರು.

‘ನೀ ಬಾರೀ ಕಿಲಾಡಿ ಇದ್ದೀಯಾ. ಒಂದು ಹೇಳ್ತೀನಿ ಕೇಳು, ನಾನು ಏನ್ಮಾಡೋಕೂ ತಯಾರಿದ್ದೇನೆ. ನಿನ್ನಾಟ ನನ್ನ ಹತ್ತಿರ ನಡೆಯಲ್ಲ. ಕೇಳಿಲ್ಲಿ, ನಾನು ಫಸ್ಟ್ 1994-95 ಬಂಧೀಖಾನೆ ಮಂತ್ರಿಯಾಗಿದ್ದೆ. ಸರಿಯಾಗಿ ಕೆಲಸ ಮಾಡದೇ ಇದ್ದರೆ ಬಂಧೀಖಾನೆ ಹೇಗಿದೆ ಅಂತ ನೋಡಿಕೊಂಡು ಬರೋಕೆ ಕಳುಹಿಸುತ್ತೇನೆ’ ಎಂದು ಜನರಲ್ ಮ್ಯಾನೇಜರ್‌ಗೆ ಎಚ್ಚರಿಕೆ ಕೊಟ್ಟರು.

ಇಲ್ಲಿನ ನೌಕರರ ಸಮಸ್ಯೆ ಬಗೆಹರಿಯಬೇಕು, ಉತ್ಪಾದನೆ ಜಾಸ್ತಿ ಆಗಬೇಕು ಅಷ್ಟೆ. ಯಾವ ಕಳ್ಳಾಟ ನಡೆಯೋಕೆ ಬಿಡಲ್ಲ ಎಂದು ಖಡಕ್ ಆಗಿ ಸಚಿವರು ಎಚ್ಚರಿಸಿದರು. ಬಳಿಕ ನೌಕರರ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

Comments

Leave a Reply

Your email address will not be published. Required fields are marked *