ನಮ್ಮ ಮೊದಲ ಆದ್ಯತೆ ದೇಶ – ಬಾಯಿ ಚಪಲಕ್ಕೆ ಹೇಳಿಕೆ ಸರಿಯಲ್ಲ: ವಿ ಸೋಮಣ್ಣ

ಕಲಬುರಗಿ: ನಮಗೆ ಎಲ್ಲದಕ್ಕಿಂತ ಮೊದಲು ದೇಶ, ನಂತರ ಪಕ್ಷ. ಬಾಯಿ ಚಪಲಕ್ಕೆ ಹೇಳಿಕೆ ನೀಡಿರುವುದು ಸರಿಯಲ್ಲ. ಇಂತಹ ಸಣ್ಣ ಪುಟ್ಟ ವಿಚಾರಗಳನ್ನು ಮಾಧ್ಯಮಗಳು ಪ್ರಸಾರ ಮಾಡುವುದನ್ನು ಕಡಿಮೆ ಮಾಡಿದರೆ ಇವರೆಲ್ಲ ಕಳೆದುಹೋಗುತ್ತಾರೆ ಎಂದು ಬಿಜೆಪಿ ಶಾಸಕ ವಿ ಸೋಮಣ್ಣ ಅವರು ಹೇಳಿದ್ದಾರೆ.

ಬಿಜೆಪಿ ಸಂಸದರಾದ ಅನಂತ್ ಕುಮಾರ್ ಹೆಗ್ಡೆ ಹಾಗೂ ನಳಿನ್ ಕುಮಾರ್ ಕಟೀಲ್ ಟ್ವೀಟ್ ವಿಚಾರ ಚಿಂಚೋಳಿಯಲ್ಲಿ ಮಾತನಾಡಿದ ಅವರು, ಅನಂತಕುಮಾರ್ ಹೆಗ್ಡೆ ಅವರ ಮಾತನ್ನು ನಾನು ಎಂದೂ ಬೆಂಬಲಿಸುವುದಿಲ್ಲ. ಅವರು ಆರನೇ ಬಾರಿಗೆ ಸಂಸದರಾಗುತ್ತಿದ್ದಾರೆ ಎಂಬ ಸುಳಿವಿದೆ. ಆದರೆ ಮಾಧ್ಯಮದಲ್ಲಿ ಇಂತಹ ಸುದ್ದಿ ಕಡಿಮೆಯಾದರೆ ಅವರಷ್ಟಕ್ಕೆ ಅವರು ದಾರಿಗೆ ಬರುತ್ತಾರೆ. ಅವರನ್ನೆಲ್ಲಾ ಸರಿ ಮಾಡೋಕೆ ನಾವು ಇದ್ದೇವೆ, ಪ್ರಧಾನಿ ಇದ್ದಾರೆ ಎಂದು ತಿಳಿಸಿದರು.

ಕೇವಲ ಒಬ್ಬ ಅನಂತಕುಮಾರ್ ಹೆಗಡೆ ಅಲ್ಲ, ಸಿದ್ದರಾಮಯ್ಯ, ಪರಮೇಶ್ವರ, ಪ್ರಿಯಾಂಕ್ ಖರ್ಗೆ ಎಲ್ಲರ ಭಾಷೆಯೂ ಹೀಗೆ ಆಗಿದೆ. ಪ್ರಿಯಾಂಕ್ ಖರ್ಗೆ ಅವರಿಗೂ ಎಷ್ಟು ಸೊಕ್ಕು ಇದ್ದರೆ ಪ್ರಧಾನಿ ಅವರನ್ನ ನನ್ನ ಕಾಲು ತೊಳೆಯಲಿ ಎಂದು ಹೇಳುತ್ತಾರೆ. ಇದನ್ನೆನಾ ಅವರ ತಂದೆ ಕಲಿಸಿಕೊಟ್ಟಿರುವುದು ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಉಮೇಶ್ ಜಾಧವ್ 50 ಕೋಟಿ ರೂ. ತೆಗೆದುಕೊಂಡಿದ್ದಾರೆ ಎಂದು ಹೇಳುವ ಕಾಂಗ್ರೆಸ್ ಹೇಳುತ್ತಾರೆ. ಆದರೆ 78 ಜನ ಶಾಸಕರು ಹೋಗಿ ಜೆಡಿಎಸ್ ಜೊತೆ ಸೇರಿಕೊಳ್ಳಲು ದೇವೇಗೌಡರ ಜೊತೆ ಎಷ್ಟು ತೆಗೆದುಕೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ರೇವಣ್ಣ ಸಿಎಂ ಆಗುವ ಆರ್ಹತೆ ಇದೆ ಎಂದು ಬೆಳ್ಳುಳ್ಳಿ ಪಟಾಕಿ ಹಾಕಿದ್ದು, ಆದರೆ ಅವರು ಟೈಮ್ ಬಾಂಬ್ ಹಾಕುತ್ತಾರೆ. ಈಗಾಗಲೇ ದೇವೇಗೌಡರು, ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ನಾನು ಕೂಡಾ ದೇವೇಗೌಡರ ಗರಡಿಯಲ್ಲಿ ಬೆಳೆದವನು. ಅವರ ಎಲ್ಲಾ ಮುಖಗಳನ್ನೂ ನೋಡಿದ್ದೇನೆ. ಇನ್ನೂ ಎರಡು ಮೂರು ದಿನಗಳಲ್ಲಿ ಕಾಲಚಕ್ರ ಹೇಗೆ ತಿರುಗುತ್ತದೆ ನೋಡುತ್ತಿರಿ ಎಂದರು.

ಇಂದು ಸಂಜೆ ಆರು ಗಂಟೆ ನಂತರ ಕಾಂಗ್ರೆಸ್ ನವರನ್ನು ಕ್ಷೇತ್ರದಲ್ಲಿ ಉಳಿಯಲು ಅವಕಾಶ ಕೊಟ್ಟರೆ ನಾವು ನೇರವಾಗಿ ನಿಮ್ಮನ್ನು ಟಾರ್ಗೆಟ್ ಮಾಡಬೇಕಾಗುತ್ತದೆ ಎಂದು ಕಲ್ಬುರ್ಗಿ ಡಿಸಿ, ಎಸ್‍ಪಿ ಅವರಿಗೆ ದೂರವಾಣಿ ಮೂಲಕ ಹೇಳಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಮಗ ಎಂದು ಪ್ರಿಯಾಂಕ್ ಖರ್ಗೆಗೆ ಆದ್ಯತೆ ಕೊಡಬಾರದು. ಚಿಂಚೋಳಿಯಲ್ಲಿ ಬಿಜೆಪಿ ಅಭ್ಯರ್ಥಿ ಸೋತರೆ ಮತ್ತೆ ನಾನು ಯಾವುದೇ ಉಪಚುನಾವಣಾ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಸವಾಲು ಎಸೆದರು.

Comments

Leave a Reply

Your email address will not be published. Required fields are marked *