ಮಗನನ್ನು ಅಂಗನವಾಡಿಗೆ ಸೇರಿಸುವ ಮೂಲಕ ಮಾದರಿಯಾದ ಜಿಲ್ಲಾಧಿಕಾರಿ

ಡೆಹ್ರಾಡೂನ್: ಉತ್ತರಾಖಂಡ್ ನ ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಾತಿ ಭಡೌರಿಯಾ ತನ್ನ ಮಗನನ್ನು ಗೋಪೇಶ್ವರ್ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಸೇರಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ವಾತಿ ಭಡೌರಿಯಾರವರು ತಮ್ಮ ಎರಡೂವರೆ ವರ್ಷದ ಮಗ ಅಭ್ಯುದಯ್ ನನ್ನು ಅಂಗನವಾಡಿ ಶಾಲೆಗೆ ದಾಖಲಿಸಿದ್ದಾರೆ. ಅಲ್ಲದೇ ಉನ್ನತ ಹುದ್ದೆಯಲ್ಲಿಯರುವವರು, ತಮ್ಮ ಮಕ್ಕಳನ್ನು ಎಂದಿಗೂ ಹೈ-ಫೈ ಶಾಲೆಗಳಿಗೆ ಸೇರಿಸುವುದು ಸಾಮಾನ್ಯ ಸಂಗತಿ. ಆದರೆ ಚಮೋಲಿ ಜಿಲ್ಲೆಯ ಜಿಲ್ಲಾಧಿಕಾರಿ ಅದಕ್ಕೆ ಅಪವಾದವೆಂಬಂತೆ ನಡೆದುಕೊಂಡಿದ್ದಾರೆ. ಖುದ್ದು ತನ್ನ ಮಗನನ್ನು ಸರ್ಕಾರಿ ಅಂಗನಾಡಿ ಕೇಂದ್ರಕ್ಕೆ ದಾಖಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ರಾಜ್ಯ ಸರ್ಕಾರ ನಡೆಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದೆ. ಅಲ್ಲದೇ ಮಕ್ಕಳ ವಿದ್ಯಾಭ್ಯಾಸವನ್ನು ಸರಿಯಾಗಿ ಕೊಡುತ್ತಿಲ್ಲ ಎನ್ನುವ ಆರೋಪವನ್ನು ತೆಗೆದು ಹಾಕಲು ನಾನು ಈ ನಿರ್ಧಾರ ಕೈಗೊಂಡಿದ್ದೇನೆ. ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಶಿಕ್ಷಣ, ಆಟ ಹಾಗೂ ಊಟ-ಉಪಚಾರಗಳು ಒಂದೇ ರೀತಿ ಇರುತ್ತದೆ. ಅಂಗನವಾಡಿಗಳ ಕುರಿತು ತಪ್ಪು ಕಲ್ಪನೆ ಬೆಳೆಸಿಕೊಳ್ಳುವುದು ಸರಿಯಲ್ಲ ಎಂದರು.

ಅಂಗನವಾಡಿ ಕೇಂದ್ರದಲ್ಲಿ ತಮ್ಮ ಮಗ ಇತರರೊಂದಿಗೆ ಹಂಚಿ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಇತರ ಮಕ್ಕಳ ಜೊತೆ ತುಂಬಾ ಚೆನ್ನಾಗಿ ಆಟವಾಡುತ್ತಿದ್ದಾನೆ. ಈ ಕೇಂದ್ರಗಳಲ್ಲಿ ಮಕ್ಕಳು ಬೌದ್ಧಿಕವಾಗಿ ಹೆಚ್ಚು ಕಲಿಯುತ್ತಾರೆ. ಎಲ್ಲರೊಂದಿಗೆ ಬೆರೆಯುತ್ತಾರೆ. ದೈಹಿಕ ಮತ್ತು ಮಾನಸಿಕವಾಗಿಯೂ ಸದೃಢರಾಗುತ್ತಾರೆ. ಅಂಗನವಾಡಿ ಕೇಂದ್ರಗಳನ್ನು ನೋಡುವ ರೀತಿ ಬದಲಾಗಬೇಕು ಎಂದು ಹೇಳಿದ್ದಾರೆ.

ಸ್ವಾತಿ ಭಡೌರಿಯಾರ ಪತಿ ಕೂಡ ಐಎಎಸ್ ಅಧಿಕಾರಿಯಾಗಿದ್ದು, ಅವರು ಸಹ ಉತ್ತರಾಖಂಡ್‍ನ ಅಲ್ಮೋರಾ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳ ಮೇಲಿರುವ ಅಪನಂಬಿಕೆಯನ್ನು ಜನರಿಂದ ಹೋಗಲಾಡಿಸಬೇಕು. ಹೀಗಾಗಿ ಮಗನನ್ನು ಅಂಗನವಾಡಿಗೆ ಸೇರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *