ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಹಾಕ್ಬೇಡಿ: ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಪತ್ರ

ಕಾರವಾರ: ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ಶಿಷ್ಟಾಚಾರದ ಪ್ರಕಾರ ತನ್ನ ಹೆಸರು ನಮೂದಿಸಬೇಡಿ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಅನಂತ್ ಕುಮಾರ್ ಹೆಗಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕರ್ನಾಟಕ ಸರ್ಕಾರದ ಶಿಷ್ಟಾಚಾರ ವಿಭಾಗದ ಮುಖ್ಯ ಕಾರ್ಯದರ್ಶಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರಿಗೆ ತನ್ನ ಆಪ್ತ ಸಹಾಯಕ ರಮೇಶ್ ಮೂಲಕ ಪತ್ರ ಕಳುಹಿಸುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ. ಇದೇ ತಿಂಗಳ 14ರಂದು ಪತ್ರ ಕಳುಹಿಸಲಾಗಿದ್ದು ನವೆಂಬರ್ 10ರಂದು ಟಿಪ್ಪು ಜಯಂತಿಯನ್ನು ಆಚರಿಸಲಾಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾಗೂ ರಾಜ್ಯದ ಯಾವುದೇ ಕಾರ್ಯಕ್ರಮದಲ್ಲಾಗಲೀ ಹಾಗೂ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರನ್ನು ಹಾಕದಂತೆ ಪತ್ರ ಬರೆದಿದ್ದಾರೆ.

ಟಿಪ್ಪು ಜಯಂತಿಗೆ ಹಿಂದಿನಿಂದಲೂ ವಿರೋಧ ವ್ಯಕ್ತಪಡಿಸುತ್ತಿದ್ದ ಅನಂತ್ ಕುಮಾರ್ ಹೆಗಡೆ, ‘ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ. ಈ ಕಾರಣದಿಂದಾಗಿ ನನ್ನ ಹೆಸರನ್ನು ಆಮಂತ್ರಣ ಪತ್ರದಲ್ಲಿ ಹಾಕಬೇಡಿ’ ಎಂದು ಆಪ್ತಕಾರ್ಯದರ್ಶಿ ಮೂಲಕ ಕಳುಹಿಸಿರುವ ಪತ್ರದಲ್ಲಿ ತಿಳಿಸಿದ್ದಾರೆ. ಕಳೆದ ಬಾರಿಯೂ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತನ್ನ ಹೆಸರನ್ನು ಹಾಕದಂತೆ ಪತ್ರ ಬರೆದಿದ್ದಲ್ಲದೇ ಉತ್ತರ ಕನ್ನಡ ಜಿಲ್ಲೆಯ ಜಿಲ್ಲಾಡಳಿತ ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಕೂಡ ಭಾಗಿಯಾಗದೇ ಟಿಪ್ಪು ಜಯಂತಿಗೆ ಸಂಸದ ಅನಂತ ಕುಮಾರ್ ಹೆಗಡೆ ವಿರೋಧ ವ್ಯಕ್ತಪಡಿಸಿದ್ರು.

 

Comments

Leave a Reply

Your email address will not be published. Required fields are marked *