ಪುತ್ರಿಯನ್ನು ಹೂಳಲು ಹೋದ ತಂದೆಗೆ ಸಿಕ್ಕಳು ಜೀವಂತ ಹೆಣ್ಣುಮಗಳು

ಲಕ್ನೋ: ಮರಣ ಹೊಂದಿದ ತನ್ನ ಹೆಣ್ಣು ಮಗುವಿನ ಶವನ್ನು ಹೂಳಲು ಹೋದ ತಂದೆಯೊಬ್ಬರಿಗೆ ಜೀವಂತ ಹೆಣ್ಣು ಮಗು ಸಿಕ್ಕಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ.

ವೃತ್ತಿಯಲ್ಲಿ ವ್ಯಾಪಾರಿಯಾಗಿರುವ ಹಿತೇಶ್ ಕುಮಾರ್ ಸಿರೋಹಿ ಅವರ ಪತ್ನಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ ಅವಧಿಗೂ ಮುನ್ನಾ ಅಂದರೆ ಏಳು ತಿಂಗಳಿಗೆ ಮಗು ಹುಟ್ಟಿದ ಕಾರಣ ಕೆಲವೇ ಗಂಟೆಗಳಲ್ಲಿ ಮಗು ಸಾವನ್ನಪ್ಪಿತ್ತು. ಈ ಮಗುವಿನ ಶವವನ್ನು ಅಂತ್ಯಕ್ರಿಯೆ ಮಾಡಲು ಗುಂಡಿ ತೆಗೆಯುವಾಗ ಇನ್ನೊಂದು ಜೀವಂತ ಹೆಣ್ಣು ಮಗು ಅವರಿಗೆ ಸಿಕ್ಕಿದೆ.

ಮಗುವಿನ ಶವ ಹೂಳಲು ಗುಂಡಿ ತೆಗೆಯುವ ಸಮಯದಲ್ಲಿ ಸುಮಾರು ಮೂರು ಅಡಿ ಗುಂಡಿ ತೆಗೆದ ನಂತರ ಮಣ್ಣಿನ ಮಡಿಕೆಯಲ್ಲಿ ಒಂದು ಹೆಣ್ಣು ಮಗು ಇರುವುದು ಕಂಡುಬಂದಿದೆ. ತಕ್ಷಣ ಅದನ್ನು ಹೊರತೆಗೆದ ಹಿತೇಶ್ ಮಗುವಿಗೆ ಹಾಲು ಕುಡಿಸಿ, ಹತ್ತಿರದ ಆಸ್ಪತ್ರೆಗೆ ಮಗುವನ್ನು ದಾಖಲು ಮಾಡಿದ್ದಾರೆ. ಈಗ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಪೊಲೀಸ್ ಅಧಿಕಾರಿ ಶೈಲೇಂದ್ರ ಪಾಂಡೆ, ಈ ವಿಚಾರವಾಗಿ ಪ್ರಕರಣ ದಾಖಲಾಗಿದೆ. ನಾವು ಈ ಮಗುವನ್ನು ಜೀವಂತ ಸಮಾಧಿ ಮಾಡಿರುವ ಪೋಷಕರನ್ನು ಹುಡುಕುತ್ತಿದ್ದೇವೆ. ಈ ವಿಚಾರ ತಿಳಿದು ಬರೇಲಿಯ ಚೀನಾಪುರಾದ ಶಾಸಕ ರಾಜೇಶ್ ಮಿಶ್ರಾ ಮಗುವಿನ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಹೇಳಿದ್ದಾರೆ. ಈಗ ಮಗುವನ್ನು ನಾವು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದು, ಮಗು ಸುರಕ್ಷಿತವಾಗಿದೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *