ಯುಪಿ ಭವಿಷ್ಯ ಅಖಿಲೇಶ್ ಯಾದವ್ ಕೈಯಲ್ಲಿ ಸುರಕ್ಷಿತವಾಗಿರುತ್ತೆ: ಮಯಾಂಕ್ ಜೋಶಿ

ಲಕ್ನೋ: ಉತ್ತರ ಪ್ರದೇಶದ ಭವಿಷ್ಯ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಕೈಯಲ್ಲಿ ಸುರಕ್ಷಿತವಾಗಿರುತ್ತದೆ ಎಂದು ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾದ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ ಹೇಳಿದರು.

ನಾನು ಇಂದು ಸಮಾಜವಾದಿ ಪಕ್ಷಕ್ಕೆ ಸೇರಿದ್ದೇನೆ. ಅಖಿಲೇಶ್ ಯಾದವ್ ಅಭಿವೃದ್ಧಿ, ಮಹಿಳೆಯರ ಸುರಕ್ಷತೆ ಮತ್ತು ಯುವಕರ ಬಗ್ಗೆ ಮಾತನಾಡುತ್ತಾರೆ. ಯುವಕನಾಗಿದ್ದಾಗ, ಪ್ರಗತಿಪರವಾಗಿ ಮಾತನಾಡುವ ಅಂತಹ ವ್ಯಕ್ತಿಯ ಜೊತೆ ನಿಲ್ಲಲು ನಾನು ಯೋಚಿಸಿದೆ. ಉತ್ತರ ಪ್ರದೇಶದ ಭವಿಷ್ಯವು ಅವರ ಕೈಯಲ್ಲಿ ಸುರಕ್ಷಿತವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ ಎಂದರು.

ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಕೊನೆಯ ಹಂತಕ್ಕೂ ಮುನ್ನ ಮಯಾಂಕ್ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರ ಸೇರ್ಪಡೆಯನ್ನು ಎಸ್‍ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಅಜಂಗಢದಲ್ಲಿ ನಡೆದ ಚುನಾವಣಾ ರ್‍ಯಾಲಿ ವೇಳೆ ಘೋಷಿಸಿದರು. ಇದನ್ನೂ ಓದಿ: ಆಂಬ್ಯುಲೆನ್ಸ್​ನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ!

ಈ ಮುನ್ನ ಮಯಾಂಕ್ ಜೋಶಿ ಅವರ ತಾಯಿ ರೀಟಾ ಬಹುಗುಣ ಜೋಶಿ ಅವರು ತಮ್ಮ ಮಗನಿಗೆ 2022 ರ ಯುಪಿ ಅಸೆಂಬ್ಲಿ ಚುನಾವಣೆಗೆ ಲಕ್ನೋ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಬಿಜೆಪಿಯಲ್ಲಿ ಕೇಳಿದ್ದರು. ಆದರೆ, ಬಿಜೆಪಿ ಮಯಾಂಕ್‍ಗೆ ಟಿಕೆಟ್ ನೀಡಲಿಲ್ಲ. ರೀಟಾ ಜೋಶಿ ಅವರು 2017ರ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಮತ್ತು ಲಕ್ನೋ ಕಂಟೋನ್ಮೆಂಟ್‍ನಿಂದ ಎಸ್‍ಪಿ ಅಭ್ಯರ್ಥಿಯಾಗಿದ್ದ ಅಪರ್ಣಾ ಯಾದವ್ ಅವರನ್ನು ಸೋಲಿಸಿದ್ದರು.

ಉತ್ತರ ಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗಲೇ ಆರು ಹಂತಗಳ ಮತದಾನ ಮುಗಿದಿದ್ದು, ಏಳನೇ ಹಂತದ ಮತದಾನ ಮಾರ್ಚ್ 7ರಂದು ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಮೋದಿ ಸರ್ಕಾರದ ಆಫರ್ ಮುಗಿಯಲಿದೆ, ಬೇಗ ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ: ರಾಹುಲ್ ಗಾಂಧಿ

Comments

Leave a Reply

Your email address will not be published. Required fields are marked *