ಪುಲ್ವಾಮಾದಲ್ಲಿ ನಡೆದಿದ್ದು ದೊಡ್ಡ ಅಪಘಾತ: ಯುಪಿ ಡಿಸಿಎಂ

ಲಕ್ನೋ: ಪುಲ್ವಾಮಾದಲ್ಲಿ ನಡೆದಿದ್ದು ದೊಡ್ಡ ಅಪಘಾತ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಹೇಳಿರುವ ವಿಡಿಯೋ ವೈರಲ್ ಆಗಿದೆ.

ಫೆಬ್ರವರಿ 21ರಂದು ಕೇಶವ್ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಹರಿಯಾಣದ ರೋಹ್ಟಕ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಪುಲ್ವಾಮಾ ದಾಳಿಯ ಭದ್ರತೆಯ ವೈಫಲ್ಯದಿಂದ ನಡೆದಿದೆ ಎಂದು ವಿಪಕ್ಷಗಳು ಆರೋಪಿಸುತ್ತವೆ. ಇಲ್ಲಿ ಭದ್ರತೆ ಲೋಪದ ಮಾತು ಬರಲ್ಲ. ಇದೊಂದು ದೊಡ್ಡ ಅಪಘಾತವಾಗಿದ್ದು, ನಮ್ಮ ಯೋಧರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು.

ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ನಡೆಸಿರುವ ಆತ್ಮಾಹುತಿ ದಾಳಿಯಲ್ಲಿ ಸಿಆರ್ ಪಿಎಫ್ 40 ಸೈನಿಕರು ಹುತಾತ್ಮರಾಗಿದ್ದರು. ಇದಾದ ಬಳಿಕ ಭಾರತ ಪ್ರತಿಕಾರವಾಗಿ ಪಾಕ್ ಗಡಿ ಪ್ರವೇಶಿಸಿ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ವಿಪಕ್ಷಗಳು ಭಾರತೀಯ ವಾಯುಪಡೆ ನಡೆಸಿರುವ ದಾಳಿಗೆ ಸಾಕ್ಷಿ ನೀಡಬೇಕೆಂದು ಆಗ್ರಹಿಸಿದ್ದವು. ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಪುಲ್ವಾಮಾದಲ್ಲಿ ನಡೆದಿದ್ದು ಅಪಘಾತ ಎಂಬ ಹೇಳಿಕೆ ನೀಡಿದ್ದರು. ದಿಗ್ವಿಜಯ್ ಸಿಂಗ್ ಹೇಳಿಕೆ ಬಿಜೆಪಿ ನಾಯಕರು ಕಿಡಿಕಾರಿದ್ದರು.

ರಾಜೀವ್ ಗಾಂಧಿ ಹತ್ಯೆಯನ್ನು ಆಕ್ಸಿಡೆಂಟ್ ಅಂತಾ ಕರೆದ್ರೆ ಹೇಗಿರುತ್ತೆ? ಕಾಂಗ್ರೆಸ್ ಸೇನೆಯ ನೈತಿಕ ಸ್ಥೈರ್ಯ ಕುಗ್ಗಿಸೋ ಕೆಲಸ ಮಾಡ್ತಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕಿಡಿಕಾರಿದ್ದರು. ಇದೀಗ ಅವರದೇ ಪಕ್ಷದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿಗಳಾಗಿರುವ ಕೇಶವ್ ಪ್ರಸಾದ್ ಹೇಳಿಕೆ ಬಿಜೆಪಿಗೆ ಮುಜುಗರವನ್ನುಂಟು ಮಾಡಿದೆ.

ಪುಲ್ವಾಮಾ ಭೀಕರ ಉಗ್ರದಾಳಿಗೆ ಜಾಗತಿಕ ಮಟ್ಟದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ದಾಳಿಯ ಮಾಸ್ಟರ್‍ಮೈಂಡ್ ಜೈಷ್ ಸಂಘಟನೆಯ ಮಸೂದ್ ಅಜರ್ ಸಹೋದರ ಅಸ್ಗರ್ ಹಾಗೂ ಪುತ್ರನನ್ನು ಪಾಕಿಸ್ತಾನ ಸರ್ಕಾರ ಬಂಧಿಸಿದೆ. ಮಸೂದ್ ಸಹೋದರ ಅಸ್ಘರ್, ಹಾಗು ಪುತ್ರ ಹಂಝು ಅಜರ್‍ನನ್ನು ಪಾಕ್ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪುಲ್ವಾಮಾ ದಾಳಿಗೆ ಸಂಬಂಧಿಸಿ ಇದುವರೆಗೆ 44 ಮಂದಿಯನ್ನು ಬಂಧಿಸಿರುವುದಾಗಿ ಪಾಕ್ ಸರ್ಕಾರ ಹೇಳಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *