ಮೂಢನಂಬಿಕೆಯನ್ನು ಸುಳ್ಳು ಮಾಡಿದ ಯೋಗಿ – ನೋಯ್ಡಾಗೆ ಭೇಟಿ ನೀಡಿದ್ರೂ ಗೆಲುವು!

ಲಕ್ನೋ: ಉತ್ತರ ಪ್ರದೇಶಲ್ಲಿ ಕ್ರಾಂತಿ ಕಾರಕ ಬದಲಾವಣೆ ತಂದಿರುವ ಸಿಎಂ ಯೋಗಿ ಆದಿತ್ಯನಾಥ್ ಅವರು ಈಗ ಮೂಢನಂಬಿಕೆಯನ್ನು ಸುಳ್ಳು ಮಾಡಿದ್ದಾರೆ.

ನೋಯ್ಡಾಗೆ ಭೇಟಿ ನೀಡುವ ಮುಖ್ಯಮಂತ್ರಿಗಳು ಮತ್ತೊಮ್ಮೆ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮೂಢ ನಂಬಿಕೆ ಇದೆ. ಈ ಮೂಢ ನಂಬಿಕೆಯನ್ನು ಯೋಗಿ ಈಗ ಸುಳ್ಳು ಮಾಡಿದ್ದಾರೆ. ಇದನ್ನೂ ಓದಿ: ಯುಪಿಯಲ್ಲಿ ಯೋಗಿಯಿಂದ ಇತಿಹಾಸ – ಬಿಜೆಪಿ ಗೆದ್ದಿದ್ದು ಹೇಗೆ?

ಉತ್ತರಪ್ರದೇಶದ ರಾಜಕೀಯ ಇತಿಹಾಸದಲ್ಲಿ ಒಂದು ನಂಬಿಕೆ ಇದೆ. ಮುಖ್ಯಮಂತ್ರಿಯಾದವರು ಉತ್ತರ ಪ್ರದೇಶದ ಕಡೆಯ ಜಿಲ್ಲೆ ನೋಯ್ಡಗೆ ಹೋಗಿ ವಾಪಸ್ ಬಂದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆ ಇತ್ತು. ಆದರೆ ಈಗ ನಂಬಿಕೆ ಸುಳ್ಳಾಗಿದೆ. ಚೆನ್ನಾಗಿ ಕೆಲಸ ಮಾಡಿದರೆ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬುದನ್ನು ಯೋಗಿ ಸಾಧಿಸಿ ತೋರಿಸಿದ್ದಾರೆ.

2018ರಲ್ಲಿ ಉತ್ತರ ಪ್ರದೇಶದಲ್ಲಿ ನೋಯ್ಡಾಕ್ಕೆ ಅಂಟಿದ್ದ 29 ವರ್ಷಗಳ ಅಪಶಕುನವನ್ನು ಉತ್ತರ ಪ್ರದೇಶ ಸಿಎಂ ಆದ ಬಳಿಕ ಯೋಗಿ ಆದಿತ್ಯನಾಥ್ ಅಳಿಸಿ ಹಾಕಿದ್ದರು. ಸಿಎಂ ಆದ ಬಳಿಕ ನೋಯ್ಡಾ ನಗರಕ್ಕೆ ಭೇಟಿ ನೀಡಿದ್ದರು. ಆ ಬಳಿಕ 2021ರಲ್ಲಿ ಕೊರೊನಾ ಸಂದರ್ಭ ನೋಯ್ಡಾ ನಗರದಲ್ಲಿ ಆಸ್ಪತ್ರೆ ಉದ್ಘಾಟನೆಗೆ ಯೋಗಿ ಭೇಟಿ ನೀಡಿದ್ದರು.

1988ರ ಜೂನ್‍ನಲ್ಲಿ ಅಂದಿನ ಮುಖ್ಯಮಂತ್ರಿ ವೀರ್ ಬಹಾದೂರ್ ನೋಯ್ಡಾಕ್ಕೆ ಭೇಟಿ ನೀಡಿ ಹಿಂದಿರುಗಿದ ಕೂಡಲೇ ಕೇಂದ್ರದ ಅವರಿಂದ ರಾಜೀನಾಮೆ ಪಡೆದಿತ್ತು. ಹಾಗೆಯೇ ಮಾಯಾವತಿ 2002-2007ರ ಅವಧಿಯಲ್ಲಿ ಹೋಗಿ ಬಂದ ಬಳಿಕ ಮತ್ತೆ ಅಧಿಕಾರಕ್ಕೆ ಏರಿಲ್ಲ. ಆದರೆ ಯೋಗಿ ವಿಷಯದಲ್ಲಿ ಈ ಮೂಢನಂಬಿಕೆ ಸುಳ್ಳಾಗಿದೆ. ಇದನ್ನೂ ಓದಿ: ಜ್ಯೋತಿಷಿಗಳ ಭವಿಷ್ಯ – ಮಂಗಳ ಗ್ರಹದಿಂದ ಯೋಗಿಗೆ ಅದೃಷ್ಟ

ಇಂತಹ ಮೂಢನಂಬಿಕೆ ಕರ್ನಾಟದಲ್ಲೂ ಇದೆ. ಚಾಮರಾಜನಗರಕ್ಕೆ ಭೇಟಿ ನೀಡುವ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ಮೂಢ ನಂಬಿಕೆಯಿದೆ. ಈ ಕಾರಣಕ್ಕೆ ಹಲವು ಮುಖ್ಯಮಂತ್ರಿಗಳು ಚಾಮರಾಜನಗರಕ್ಕೆ ಹೋಗಲು ಹಿಂದೇಟು ಹಾಕುತ್ತಾರೆ.

Comments

Leave a Reply

Your email address will not be published. Required fields are marked *