ಕುತೂಹಲ ಮೂಡಿಸಿದ ನಡೆ – ಸಿಎಲ್‍ಪಿ ಸಭೆಗೆ `ಕೈ’ ಕೊಡಲಿದ್ದಾರಾ ಜಾಧವ್?

ಕಲಬುರಗಿ: ಇಂದು ಮಧ್ಯಾಹ್ನ ವಿಧಾನಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಸಭೆಗೆ ಚಿಂಚೋಳಿ ಶಾಸಕ ಉಮೇಶ್ ಜಾಧವ್ ಗೈರಾಗುವ ಸಾಧ್ಯತೆ ಇದೆ.

ರಮೇಶ್ ಜಾರಕಿಹೊಳಿ ಅವರು ಹೋಟೆಲ್ ನಿಂದ ಬೆಂಗಳೂರಿನತ್ತ ತೆರಳಿದರೆ, ಉಮೇಶ್ ಜಾಧವ್ ಇನ್ನೂ ಮುಂಬೈನಲ್ಲಿಯೇ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಸಿಎಲ್‍ಪಿ ಸಭೆಗೆ ಎಲ್ಲ ಶಾಸಕರು ಹಾಜರಾಗಬೇಕು. ಇಲ್ಲದೇ ಇದ್ದರೆ ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರೂ ಈ ಸಭೆಗೆ ಜಾಧವ್ ಹೋಗುವುದು ಅನುಮಾನ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಉಮೇಶ್ ಜಾಧವ್ ಸಹೋದರ ರಾಮಚಂದ್ರ ಜಾಧವ್ ಕರೆ ಮಾಡಿ ಸಭೆಯ ಮಾಹಿತಿ ನೀಡಿದ್ದರು. ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗಲು ಸೂಚಿಸುವಂತೆ ದಿನೇಶ್ ಗುಂಡೂರಾವ್ ಕಟ್ಟಪ್ಪಣೆ ಮಾಡಿದ್ದರು. ಕೆಪಿಸಿಸಿ ಅಧ್ಯಕ್ಷರ ಕಟ್ಟಪ್ಪಣೆ ನಡುವೆಯೂ ಇಂದಿನ ಶಾಸಕಾಂಗ ಸಭೆಗೆ ಉಮೇಶ್ ಜಾಧವ್ ಗೈರು ಹಾಜರಿ ಹಾಕುವ ಸಾಧ್ಯತೆ ಇದೆ. ಮಧ್ಯಾಹ್ನ 3.30ಕ್ಕೆ ಸಿಎಲ್‍ಪಿ ಸಭೆ ನಡೆಯಲಿದ್ದು, ಮುಂದಿನ ಕೆಲ ಗಂಟೆಯಲ್ಲಿ ಬೆಂಗಳೂರಿಗೆ ಬರುತ್ತಾರಾ? ಇಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ.

ಯಾಕೆ ಬೇಸರ?
ಕಳೆದ ಎರಡು ದಿನದಿಂದ ಕಾಂಗ್ರೆಸ್ ನಾಯಕರು ಉಮೇಶ್ ಜಾಧವ್ ಸಂಬಂಧಿಕರ ಜೊತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದು, ಉಮೇಶ್ ಜಾಧವ್ ಮನೆಯ ಮುಂದೆ ಪ್ರತಿಭಟನೆ ಮಾಡಿದಾಗ ಅವರ ಸಂಬಂಧಿಕರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಹೀಗಾಗಿ ಜಿಲ್ಲಾ ಕಾಂಗ್ರೆಸ್ ನಾಯಕರೇ ಉಮೇಶ್ ಜಾಧವ್ ಕಾಂಗ್ರೆಸ್ ಪಕ್ಷವನ್ನು ಬಿಡುವಂತೆ ಪ್ರಚೋದನೆ ನೀಡಿದ್ದಾರೆ. ಈ ಎಲ್ಲ ಘಟನೆಯಿಂದ ಉಮೇಶ್ ಜಾಧವ್ ತೀವ್ರ ನೊಂದಿದ್ದು, ಈಗ ಲೋಕಸಭಾ ಚುನಾವಣೆಗಾಗಿ ರಾಜಿನಾಮೆ ನೀಡುವುದಾಗಿ ಹೇಳಿದ್ದರು ಅಂತ ಅವರ ಸಹೋದರ ರಾಮಚಂದ್ರ ಜಾಧವ್ ತಿಳಿಸಿದ್ದರು.

ಶಾಸಕ ಉಮೇಶ ಜಾಧವ್‍ಗೆ ನಿಗಮ ಮಂಡಳಿಯ ಸ್ಥಾನವನ್ನು ನೀಡಲಾಗಿತ್ತು. ಆದರೂ ಕೂಡ ಇವರು ಅಸಮಾಧಾನಗೊಂಡು ಆಪರೇಷನ್ ಕಮಲಕ್ಕೆ ಒಳಗಾಗಿ ಅಶ್ವಥ್ ನಾರಾಯಣ ಅವರ ಜೊತೆ ಕಾಣಿಸಿಕೊಂಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *