ಮಗಳು ಪಿಯುಸಿಯಲ್ಲಿ ಫೇಲ್ ಆದ ಕಾರಣ ಬಿಚ್ಚಿಟ್ರು ಉಮೇಶ್ ಜಾಧವ್

ಯಾದಗಿರಿ: ನನ್ನ ಕಿರಿಯ ಮಗಳು ದ್ವಿತೀಯ ಪರೀಕ್ಷೆಯಲ್ಲಿ ಅನುತ್ತೀರ್ಣ ವಾಗಲೂ ಕಾಂಗ್ರೆಸ್ ಅವರೇ ಕಾರಣ ಎಂದು ಡಾ.ಉಮೇಶ್ ಜಾಧವ್ ಕೈ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮೇಶ್ ಜಾಧವ್, ರಾಜಕೀಯ ಗೊಂದಲ ಶುರುವಾಗುವ ಮೊದಲೇ ಪ್ರಿಯಾಂಕ್ ಖರ್ಗೆ ಅವರು ಡಾ.ಉಮೇಶ್ ಜಾಧವ್ ಅವರನ್ನು ಕಾಂಗ್ರೆಸ್ಸಿನಿಂದ ಓಡಿಸಬೇಕು ಎಂದು ಹುನ್ನಾರ ಮಾಡಿಕೊಂಡಿದ್ದರು. ನನ್ನ ಮಗನ ಮದುವೆ ವೇಳೆ ಪ್ರಿಯಾಂಕ್ ಖರ್ಗೆಯ ಆಪ್ತರು ಮನೆಗೆ ಬಂದು ಗಲಾಟೆ ಮಾಡಿದ್ದರು. ಇದನ್ನು ಕಂಡು ನಮ್ಮ ಮನೆಯಲ್ಲಿದ್ದ ಬೀಗರು ಅಂದೇ ಅವರ ಊರಿಗೆ ಮರಳಿದ್ದರು ಎಂದು ತಿಳಿಸಿದ್ದಾರೆ.

ಹಣ ತೆಗೆದುಕೊಂಡಿದ್ದೇನೆ ಎಂದು ದಿನವೂ ಸುಳ್ಳು ಆರೋಪ ಮಾಡುತ್ತಿದ್ದಾರೆ. ಹೀಗಾಗಿ ನನ್ನ ಮಗಳು ಪಿಯುಸಿ ಪರೀಕ್ಷೆ ಬರೆಯಲು ಹೋದಾಗ ಶಿಕ್ಷಕರೊಬ್ಬರು, ಇವರ ಅಪ್ಪ ಮಾರಾಟವಾಗಿದ್ದಾನೆ ಎಂದು ಹೇಳಿದ್ದಾರೆ. ಇದರಿಂದ ನೊಂದ ಮಗಳು ಪರೀಕ್ಷೆ ಬರೆಯದೇ ಅಳುತ್ತಾ ಮನೆಗೆ ಬಂದು ಮಾತ್ರೆ ಸೇವಿಸಿ ಆತ್ಮಹತ್ಯೆಗೂ ಮುಂದಾಗಿದ್ದಳು. ತಕ್ಷಣ ನನ್ನ ಪತ್ನಿ ನೋಡಿ ಆಕೆಯನ್ನು ಬದುಕಿಸಿದ್ದೇವೆ ಎಂದು ಉಮೇಶ್ ಜಾಧವ್ ಆರೋಪಿಸಿದ್ದಾರೆ.

ಸಂಸದ ಸ್ಥಾನದ ಚುನಾವಣೆಯಿಂದಲೂ ನನ್ನ ಮೇಲೆ ಕಾಂಗ್ರೆಸ್ ನಾಯಕರು ವೈಯಕ್ತಿಕ ಆರೋಪ ಮಾಡುತ್ತಾ ಬಂದಿದ್ದಾರೆ. ನನ್ನ ಮೇಲೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿರುವ ಸಲುವಾಗಿ ನನ್ನ ಕುಟುಂಬಸ್ಥರು ಮಾನಸಿಕವಾಗಿ ಕುಗ್ಗಿದ್ದಾರೆ. ನಾನು ಹಣ ತೆಗೆದುಕೊಂಡಿದ್ದೇನೆಂದು ನನ್ನ ಮಗಳ ಕಾಲೇಜಿನಲ್ಲಿ ಅವಳಿಗೆ ಅವಮಾನ ಮಾಡಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತನಾಡದೆ ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಜಾಧವ್ ಆಕ್ರೋಶಗೊಂಡಿದ್ದಾರೆ.

Comments

Leave a Reply

Your email address will not be published. Required fields are marked *