ಆಧಾರ ಸ್ತಂಭವಾಗಿದ್ದ ಮಗನ ಕಳಕೊಂಡು ತಂದೆ, ತಾಯಿ ಕಣ್ಣೀರು

– ಅಪಘಾತವಲ್ಲ ಕೊಲೆಯೆಂದು ಆರೋಪ

ಉಡುಪಿ: ಬಡ ಕುಟುಂಬದ ಆಧಾರ ಸ್ತಂಭವಾಗಿದ್ದ ಯುವಕನೊಬ್ಬ ನಡು ವಯಸ್ಸು ದಾಟಿದ ತಂದೆ ತಾಯಿಗೆ ಊರುಗೋಲಾಗಿ, ತಮ್ಮನ ವಿಧ್ಯಾಭ್ಯಾಸಕ್ಕೆ ದಾರಿ ದೀಪವಾಗಲು ತಯಾರಾಗಿದ್ದನು. ಏನಾಯ್ತೋ ಏನೋ ಒಂದು ರಾತ್ರಿ ವಿನೋದ್ ಜೀವನದಲ್ಲಿ ಕೊನೆಯ ರಾತ್ರಿಯಾಯ್ತು. ಕಗ್ಗತ್ತಲ ಕಾಡಿನ ರಸ್ತೆ ಜೀವಕ್ಕೆ ಕುತ್ತು ತಂದಿತ್ತು. ಆದರೆ ವಿನೋದ್ ಸಾವಿನ ಹಿಂದೆ ವ್ಯವಸ್ಥಿತ ಸಂಚಿದೆ ಎಂಬೂದು ಕುಟುಂಬಸ್ಥರ ಆರೋಪವಾಗಿದೆ.

ಹೌದು. ಮೂರು ತಿಂಗಳ ಹಿಂದೆ ಮಗ ವಿನೋದ್ ಮೃತಪಟ್ಟ ನೆನಪು ತಾಯಿಯನ್ನು ಮತ್ತೆ ಮತ್ತೆ ಬಿಕ್ಕಳಿಸಿ ಅಳುವಂತೆ ಮಾಡುತ್ತಿದೆ. ವಿನೋದ್ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಶಿರ್ವದ ಯುವಕ. ಬಡ ಕುಟುಂಬವಾದ್ದರಿಂದ ಓದು ನಿಲ್ಲಿಸಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಜೂನ್ 26ರ ರಾತ್ರಿ ಗೆಳೆಯರೆಲ್ಲ ಸೇರಿಕೊಂಡು ಮಂಚಕಲ್ಲುವಿನ ಮರೀನಾ ಬಾರಿನಲ್ಲಿ ಪಾರ್ಟಿ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಜಗಳವಾಗಿದೆ. 11 ಗಂಟೆ ಸುಮಾರು ಬಾರ್‍ನಿಂದ ಮನೆಗೆ ತನ್ನ ಗೆಳೆಯ ಕುಮಾರನೊಂದಿಗೆ ವಿನೋದ್ ಹೊರಟಿದ್ದಾನೆ. ಮನೆಯಿಂದ ಅರ್ಧ ಕೊಲೋಮೀಟರ್ ದೂರದಲ್ಲಿ ವಿನೋದ್ ಮೃತದೇಹ ಪತ್ತೆಯಾಗಿದೆ. ಅಪಘಾತ ಎಂದು ಎಫ್‍ಐ ಆರ್ ದಾಖಲಾಗಿದೆ. ಆದರೆ ಇದೊಂದು ವ್ಯವಸ್ಥಿತ ಕೊಲೆ ವಿನೋದ್ ಪೋಷಕರು ಆರೋಪಿಸಿದ್ದಾರೆ.

ಬೈಕ್ ಸ್ಕಿಡ್ ಆಗಿ ವಿನೋದ್ ಮೃತಪಟ್ಟಿದ್ದಾನೆ ಎಂದು ಎಫ್‍ಐಆರ್‍ನಲ್ಲಿ ದಾಖಲಾಗಿದೆ. ಹಿಂಬದಿ ಸವಾರ ಕುಮಾರನಿಗೂ ತರಚಿದ ಗಾಯಗಳಾಗಿದೆ ಅಂತಲೂ ನಮೂದಿಸಲಾಗಿದೆ. ಆದರೆ ಕುಟುಂಬಸ್ಥರು ಇದನ್ನು ಒಪ್ಪುತ್ತಿಲ್ಲ. ಸುತ್ತಮುತ್ತಲ ಸಿಸಿಟಿವಿ ಫೂಟೇಜ್ ಪರಿಶೀಲಿಸುವಾಗ ವಿನೋದ್ ಮತ್ತು ಗೆಳೆಯ ಕುಮಾರ ಜೊತೆಗೆ ಬೈಕಿನಲ್ಲಿ ಹೋಗಿದ್ದಾರೆ. ಅಪಘಾತವಾದ ಸ್ಥಳದಲ್ಲಿ ಯಾವುದೇ ಕುರುಹುಗಳು ಕಾಣಿಸಿಲ್ಲ. ಬೈಕಿಗೆ ಡ್ಯಾಮೇಜಾಗಿಲ್ಲ. ವಿನೋದ್ ಮೃತದೇಹದ ಮೇಲೆ ಗಾಯಗಳಿಲ್ಲ. ಫೋನ್ ನಲ್ಲಿ ಜಗಳದ ಸಂಭಾಷಣೆಗಳು ರೆಕಾರ್ಡ್ ಆಗಿದೆ. ಮರಣೋತ್ತರ ಪರೀಕ್ಷೆ ವರದಿ ಇನ್ನೂ ಬಂದಿಲ್ಲ. ಎಸ್‍ಪಿ, ಎಎಸ್‍ಪಿ, ಸರ್ಕಲ್ ಆಫೀಸ್‍ಗಳಿಗೆ ಎಷ್ಟೇ ಸುತ್ತಿದ್ದರೂ ನ್ಯಾಯ ಸಿಗುತ್ತಿಲ್ಲ ಎಂದು ವಿನೋದ್ ತಾಯಿ ಮಲ್ಲಿಕಾ ಕಣ್ಣೀರು ಹಾಕಿದ್ದಾರೆ.

ಘಟನೆ ನಡೆದ ದಿನ ಜೊತೆಗಿದ್ದ ಗೆಳೆಯರನ್ನು ಕರೆಸಿ ವಿಚಾರಣೆ ಮಾಡಬೇಕು. ಅಪಘಾತದಿಂದ ಸಾವನ್ನಪ್ಪಿದ್ದರೆ ಮರಣೋತ್ತರ ಪರೀಕ್ಷೆ ವರದಿ ಬರಲಿ, ಸಂಚು ರೂಪಿಸಿ ಕೊಲೆಗೈದಿದ್ದರೆ ಆರೋಪಿಗಳಿಗೆ ಶಿಕ್ಷೆಯಾಗಲಿ ಎಂದು ಕುಟುಂಬಸ್ಥರು ಒತ್ತಾಯಿಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *