ಭಾವಿ ಪರ್ಯಾಯ ಶ್ರೀಗಳಿಗೆ ಪೇಜಾವರಶ್ರೀ ವಿಶೇಷ ಗೌರವಾರ್ಪಣೆ

ಉಡುಪಿ: ಭಾವಿ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಪೇಜಾವರ ಮಠದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಗಿದೆ.

ಉಡುಪಿಯ ಮುಚ್ಚಿಲ್ಗೋಡು ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪಟ್ಟದ ದೇವರ ಪೂಜೆ, ಔತಣದೊಂದಿಗೆ ವಿಶೇಷ ಗೌರವಾರ್ಪಣೆಯನ್ನು ಪೇಜಾವರ ಮಠದ ಕಡೆಯಿಂದ ಮಾಡಲಾಯಿತು. ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ದೇವತಾ ಕಾರ್ಯಕ್ಕೆ ಬೇಕಾದ ವಸ್ತುಗಳನ್ನು ನೀಡಿ ಶಾಲು ಹೊದಿಸಿ ಗೌರವಿಸಿದರು.

ಅದಮಾರು ಪರ್ಯಾಯ ಪ್ಲಾಸ್ಟಿಕ್ ಮುಕ್ತವಾಗಿರಲು ಘೋಷಿಸಿದ್ದು, ಈಗಾಗಲೇ ಸ್ವಾಗತ ಗೋಪುರ, ಬ್ಯಾನರ್ ಗಳನ್ನು ಬಟ್ಟೆಯಿಂದ ತಯಾರು ಮಾಡಲಾಗಿದೆ. ಸಮ್ಮಾನದ ಸಂದರ್ಭದಲ್ಲಿ ತೆಂಗಿನ ಗರಿಯಿಂದ ಮಾಡಿದ ವಿಶೇಷ ಟೋಪಿಯನ್ನು ಪೇಜಾವರ ಶ್ರೀಗಳು ಅದಮಾರು ಕಿರಿಯಶ್ರೀಗಳಿಗೆ ತೊಡಿಸಿದರು. ವಿಶ್ವಪ್ರಸನ್ನ ಸ್ವಾಮೀಜಿಗೂ ಗೌರವ ಸಮರ್ಪಣೆ ಮಾಡಲಾಯ್ತು.

ಶ್ರೀ ಕೃಷ್ಣ ದೇವರ ಸೇವೆ ಮಾಡುವುದಕ್ಕೆ ವಾದಿರಾಜ ಶ್ರೀಪಾದರು 2 ತಿಂಗಳಿಗೆ ಇದ್ದ ಪರ್ಯಾಯಾವಧಿಯನ್ನು 2 ವರ್ಷಗಳಿಗೆ ಮಾರ್ಪಾಟು ಮಾಡಿದರು. ನಾಡಿನಾದ್ಯಂತ ಸಂಚಾರ ಮಾಡಿ ಸರ್ವಜ್ಞ ಪೀಠವನ್ನೇರಲಿರುವ ಶ್ರೀಪಾದರಿಗೆ ಪರ್ಯಾಯ ಕಾಲದಲ್ಲಿ ನಮ್ಮ ಪೂರ್ಣ ಸಹಕಾರ ಕೊಡುತ್ತೇವೆ. ಗುರುಗಳಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಮಠ ಮಠಗಳ ಸಂಬಂಧವನ್ನು ಉತ್ತಮ ರೀತಿಯಲ್ಲಿ ಬೆಳೆಸುತ್ತೇವೆ ಎಂದು ಈ ಸಂದರ್ಭದಲ್ಲಿ ಪೇಜಾವರ ಮಠಾಧೀಶರು ಸಂದೇಶ ನೀಡಿದರು.

Comments

Leave a Reply

Your email address will not be published. Required fields are marked *