ಉಡುಪಿ ಡಿಸಿ ಕೊಲೆ ಯತ್ನ: ಇಂದು ಕರ್ತವ್ಯಕ್ಕೆ ಹಾಜರಾಗದೇ ಸರ್ಕಾರಿ ನೌಕರರಿಂದ ಪ್ರತಿಭಟನೆ

ಉಡುಪಿ: ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸಿ ಶಿಲ್ಪಾ ನಾಗ್, ಅಂಪಾರು ಗ್ರಾಮದ ವಿಎ ಕಾಂತರಾಜ್, ಡಿಸಿ ಗನ್ ಮ್ಯಾನ್ ಸೇರಿದಂತೆ 7 ಮಂದಿ ಮೇಲೆ ಮರಳು ದಂಧೆಕೋರರು ಕೊಲೆಗೆ ಯತ್ನ ನಡೆಸಿ ಹಿನ್ನೆಲೆಯಲ್ಲಿ ಇಂದು ಉಡುಪಿ ಜಿಲ್ಲೆಯ ಕಂದಾಯ ಇಲಾಖೆಯ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದೇ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ಕೊಲೆ ಯತ್ನ ನಡೆಸಿದ ಆರೋಪಿಗಳ ವಿರುದ್ಧ ಸೂಕ್ತ ತನಿಖೆಯಾಗಬೇಕು. ಕೂಡಲೇ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಎಸ್‍ಪಿ ಕೆ.ಟಿ.ಬಾಲಕೃಷ್ಣ ಅವರಲ್ಲಿ ಕಂದಾಯ ಸಿಬ್ಬಂದಿ ಒತ್ತಾಯಿಸಿದ್ದಾರೆ.

ಉಡುಪಿಯ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಮೀಪದ ಪ್ರತಿಭಟನಾ ಕಟ್ಟೆಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳ ಪ್ರತಿಭಟಿಸಿದ್ದಾರೆ. ಇಂದು ಕಂದಾಯ ಇಲಾಖೆಯ ಯಾವುದೇ ವಿಭಾಗಗಳಲ್ಲಿ ಸಾರ್ವಜನಿಕರ ಕೆಲಸ ಆಗುವುದಿಲ್ಲ. ಯಾವುದೇ ಫೈಲ್‍ಗಳು ಮೂವ್ ಆಗುವುದಿಲ್ಲ.

ಕಂದಾಯ ಇಲಾಖೆಯ ಎಲ್ಲಾ ಸಿಬ್ಬಂದಿ ಒಂದೇ ದಿನ ತಮ್ಮ ಹಕ್ಕಿನ ರಜೆ ತೆಗೆದುಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಆರು ತಾಲೂಕಿನ ಎಲ್ಲಾ ಆಫೀಸರ್‍ಗಳು- ಕಚೇರಿಗಳ ಸಾವಿರಾರು ಸಿಬ್ಬಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಮೇಲಾಧಿಕಾರಿಗಳಿಗೆ ಬೆಂಬಲ ನೀಡಿದ್ದಾರೆ.

ತಪ್ಪಿತಸ್ಥರೆಲ್ಲರ ಬಂಧನವಾಗಬೇಕು, ಮರಳು ಮಾಫಿಯಾದ ಹಿಂದಿರುವ ಶಕ್ತಿಗಳಿಗೂ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆಯ ರೂಪುರೇಷೆ ಬದಲಾಯಿಸಿ- ಉಗ್ರ ಹೋರಾಟಕ್ಕೆ ಇಳಿಯಲು ಸರ್ಕಾರಿ ನೌಕರರ ಸಂಘ ನಿರ್ಧಾರ ಮಾಡಿದೆ.

Comments

Leave a Reply

Your email address will not be published. Required fields are marked *