ಅಲ್ಪಸಂಖ್ಯಾಂತರನ್ನ ಮುಂದಿಟ್ಟುಕೊಂಡು ಸಮಾಜ ವಿಭಜನೆ ಬೇಡ: ಯು.ಟಿ.ಖಾದರ್

ಹುಬ್ಬಳ್ಳಿ: ಪ್ರತಿಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯ ಮೇಲಿನ ವೈಯಕ್ತಿಕ ದ್ವೇಷ ಸಾಧನೆಗೆ ಅಲ್ಪಸಂಖ್ಯಾತರನ್ನು ಏಕೆ ಬಳಸಿಕೊಳ್ಳುತ್ತಿದ್ದೀರಿ ಎಂದು ಮಾಜಿ ಸಚಿವ ಯು.ಟಿ.ಖಾದರ್ ಅವರು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಪ್ರಶ್ನೆ ಮಾಡಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಂಎಲ್ ಸಿ ನಾಜೀರ್ ಅಹ್ಮದ್, ರಿಜಾನ್ವ ಹರ್ಷದ್, ಸಿದ್ದರಾಮಯ್ಯ ಅವರ ವಿರುದ್ಧ ವೈಯಕ್ತಿಕ ದ್ವೇಷವನ್ನು ಬೇರೆ ರೀತಿಯಲ್ಲಿ ಟೀಕೆ ಮಾಡಿ. ಆದರೆ ಅಲ್ಪಸಂಖ್ಯಾತರನ್ನು ಮುಂದಿಟ್ಟುಕೊಂಡು ಸಮಾಜವನ್ನು ವಿಭಜಿಸುವ ಕೆಲಸ ಮಾಡಬೇಡಿ ಎಂದು ಹೇಳಿದರು. ಇದನ್ನೂ ಓದಿ: ದೌರ್ಜನ್ಯ ಆರೋಪ – ದಲಿತ ಮಹಿಳೆ ಮನೆಗೆ ಭೇಟಿ ನೀಡಿದ ಸುಧಾಕರ್

ಎರಡು ಬಾರಿ ಮುಖ್ಯಮಂತ್ರಿ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಜನರಿಗೆ ಅನುಕೂಲವಾಗುವಂತಹ ಯಾವ ಯೋಜನೆ ತಂದಿದ್ದಾರೆ? ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರ ಎಲ್ಲ ರೀತಿಯ ಆಡಳಿತ ವೈಫಲ್ಯದ ವಿರುದ್ಧ ಒಂದು ದಿನವು ಟೀಕೆ ಮಾಡದ ಕುಮಾರಸ್ವಾಮಿ ಅವರು ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧವೇ ಮಾತನಾಡುತ್ತಿರುವುದು ಏಕೆ ಎಂದು ಪ್ರಶ್ನೆ ಮಾಡಿದರು.

ಆಡಳಿತ ಪಕ್ಷ ಬಿಟ್ಟು ಪ್ರತಿಪಕ್ಷವು ಮತ್ತೊಂದು ಪ್ರತಿಪಕ್ಷವನ್ನೇ ಟೀಕೆ ಮಾಡುತ್ತಿರುವುದು ನೋಡಿದರೆ ಕುಮಾರಸ್ವಾಮಿ ಅವರು ಬಿಜೆಪಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದಾರಾ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಟೀಕಿಸಿದರು.

ಶಾಸಕ ರಿಜ್ವಾನ್ ಹರ್ಷದ್ ಮಾತನಾಡಿ, ತಾವು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ತಮ್ಮ ಕ್ಯಾಬಿನೆಟ್ ನಲ್ಲಿ ಒಬ್ಬನೇ ಒಬ್ಬ ಅಲ್ಪಸಂಖ್ಯಾತರಿಗೆ ಸ್ಥಾನ ಕೊಡದ ಕುಮಾರಸ್ವಾಮಿ ಅವರು ಪ್ರತಿಬಾರಿ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತರ ಬಗ್ಗೆ ಅನುಕಂಪ ತೋರಿಸುತ್ತಿರುವುದು ಅವಕಾಶವಾದಿ ರಾಜಕಾರಣ ಎಂದು ದೂರಿದರು.

ಲಖೀಂಪುರದಲ್ಲಿ ರೈತರ ಮೇಲಿನ ಹತ್ಯೆ, ಇಂಧನ ಹೆಚ್ಚಳ, ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಹಾಗೂ ಕುಸಿದ ಆರ್ಥಿಕ ವ್ಯವಸ್ಥೆ ಕುರಿತು ಬಿಜೆಪಿ ಮತ್ತು ಪ್ರಧಾನಿ ಮೋದಿ ವಿರುದ್ಧ ಒಂದು ದಿನವು ಧ್ವನಿ ಎತ್ತಲಿಲ್ಲ. ಅಲ್ಪಸಂಖ್ಯಾತರ ಹೆಸರು ಬಳಸಿಕೊಂಡು ಸಮಾಜದಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಬಾಲಕಿ ಅತ್ಯಾಚಾರ ಪ್ರಕರಣ – ಎಸ್‍ಪಿ, ಬಿಎಸ್‍ಪಿ ಜಿಲ್ಲಾ ಅಧ್ಯಕ್ಷ ಸೇರಿ 7 ಮಂದಿ ಅರೆಸ್ಟ್

ಪರಿಷತ್ ಸದಸ್ಯ ನಸೀರ್ ಅಹ್ಮದ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಲ್ಲ ಸಮುದಾಯದವರ ಅಭಿವೃದ್ಧಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿ ಅನುದಾನ ಕೂಡಾ ಬಿಡುಗಡೆ ಮಾಡಲಾಗಿತ್ತು. ಇದೀಗ ಬಿಜೆಪಿ ಸರ್ಕಾರ ಅವುಗಳ ಅನುದಾನವನ್ನು ಕಡಿತವಾಗುವ ಕೆಲಸ ಮಾಡಿದೆ. ದೀನ ದಲಿತರು, ಶೋಷಿತರ ಮೇಲೆ ನಿತ್ಯವು ದಬ್ಬಾಳಿಕೆ ನಡೆಯುತ್ತಿದೆ. ಈ ಬಗ್ಗೆ ಚಕಾರ ಎತ್ತುತ್ತಿಲ್ಲ ಎಂದು ಟೀಕಿಸಿದ ಅವರು, ಸಿದ್ದರಾಮಯ್ಯ ಅವರನ್ನೇ ಏಕೆ ಟೀಕೆ ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದರು.

Comments

Leave a Reply

Your email address will not be published. Required fields are marked *