ಸೆಲ್ಫಿ ತೆಗೆಯಲು ಹೋಗಿ ಕಾವೇರಿ ನದಿಗೆ ಬಿದ್ದು ಟೆಕ್ಕಿಗಳಿಬ್ಬರ ದುರ್ಮರಣ

ರಾಮನಗರ: ಸೆಲ್ಫಿ ತೆಗೆಯಲು ಹೋಗಿ ಎಂಜಿನಿಯರ್ ಗಳಿಬ್ಬರು ಕಾಲು ಜಾರಿ ನೀರುಪಾಲಾಗಿರುವ ಘಟನೆ ಜಿಲ್ಲೆಯ ಕನಕಪುರ ತಾಲೂಕಿನ ಮೇಕೆದಾಟಿನಲ್ಲಿ ನಡೆದಿದೆ.

ಮೂಲತಃ ಬೀದರ್ ಜಿಲ್ಲೆಯವರಾದ ಭವಾನಿ ಶಂಕರ್(29) ಮತ್ತು ಷಮೀರ್ ರೆಹಮಾನ್ (29) ಮೃತ ದುರ್ದೈವಿಗಳು. ಬೆಂಗಳೂರಿನ ಸೋಲದೇವನಹಳ್ಳಿಯ ಖಾಸಗಿ ಕಂಪನಿಯಲ್ಲಿ ಮೃತರು ಎಂಜಿನಿಯರ್ ಗಳಾಗಿ ಕೆಲಸ ಮಾಡುತ್ತಿದ್ದರು.

ಭಾನುವಾರ ನಾಲ್ವರು ಸ್ನೇಹಿತರು ಪ್ರವಾಸಕ್ಕೆಂದು ಕನಕಪುರ ತಾಲೂಕಿನ ಮೇಕೆದಾಟಿಗೆ ತೆರಳಿದ್ದರು. ಮೇಕೆದಾಟಿನಲ್ಲಿನ ಬಂಡೆಯ ಮೇಲೆ ನಿಂತು ಕಾವೇರಿ ನೀರು ಹರಿಯುವುದರ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದರು. ಈ ವೇಳೆ ಕಾಲುಜಾರಿ ಇಬ್ಬರು ಕೂಡಾ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಕೆಆರ್ ಎಸ್ ಜಲಾಶಯದಿಂದ ನೀರನ್ನು ಹರಿಬಿಟ್ಟಿದ್ದು, ನೀರಿನ ಹರಿವು ಹೆಚ್ಚಿದ ಹಿನ್ನೆಲೆಯಲ್ಲಿ ಇಬ್ಬರು ಕೂಡಾ ಕೊಚ್ಚಿ ಹೋಗಿದ್ದಾರೆ. ಸಾತನೂರು ಪೊಲೀಸರಿಂದ ಶವಶೋಧ ಕಾರ್ಯ ನಡೆಸಿದ್ದಾರೆ. ಆದರೆ ಇದೂವರೆಗೆ ಮೃತದೇಹಗಳು ಸಿಕ್ಕಿಲ್ಲ. ನೀರಿನ ಹರಿವು ಹೆಚ್ಚಿರುವ ಕಾರಣ ತಮಿಳುನಾಡಿನ ಗಡಿಭಾಗಕ್ಕೆ ಮೃತದೇಹಗಳು ಕೊಚ್ಚಿ ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಈ ಘಟನೆ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *