ನವದೆಹಲಿ: ಜವಹಾರ್ ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್ಯು) ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮೇಲೆ ಗುಂಡು ಹಾರಿಸಿ, ಕೊಲೆಗೆ ಯತ್ನಿಸಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಆರೋಪಿಗಳು ಸೆಲ್ಫಿ ವಿಡಿಯೋ ಮಾಡಿಕೊಂಡು, ತಾವೇ ಕೊಲೆಗೆ ಯತ್ನಿಸಿದ್ದು, ಕೊಲೆ ಮಾಡಿದ್ದು ಏಕೆ ಎನ್ನುವುದನ್ನು ತೆರೆದಿಟ್ಟಿದ್ದಾರೆ.
ದರ್ವೇಶ್ ಶಾಪುರ್ ಹಾಗೂ ನವೀನ್ ದಲಾಲ್ ಎಂಬವರು ಪ್ರಕರಣದ ಹೊಣೆ ಹೊತ್ತಿದ್ದು, ಒಟ್ಟು 4 ನಿಮಿಷ 31 ಸೆಕೆಂಡ್ ಇರುವ ವಿಡಿಯೋದಲ್ಲಿ ಆರೋಪಿಗಳು ತಮ್ಮ ಹೆಸರನ್ನು ಹೇಳಿಕೊಂಡಿದ್ದಾರೆ. ಉಮರ್ ಖಾಲಿದ್ ಕೊಲೆ ಮಾಡಿ ಸ್ವಾತಂತ್ರ್ಯ ದಿನಾಚರಣೆಗೆ ಗಿಫ್ಟ್ ನೀಡುವ ಉದ್ದೇಶವಿತ್ತು ಎಂದು ತಿಳಿಸಿದ್ದಾರೆ.
ಜೆಎನ್ಯು ವಿದ್ಯಾರ್ಥಿ ಮುಖಂಡ ಉಮರ್ ಖಾಲಿದ್ ಮೇಲೆ ದೆಹಲಿಯ ಸಂಸತ್ ಬಳಿಯಿರುವ ಸಂವಿಧಾನದ ಭವನದ ಹತ್ತಿರ ಆಗಸ್ಟ್ 13 ರಂದು ಗುಂಡಿನ ದಾಳಿ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳದಲ್ಲಿಯೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ವ್ಯಕ್ತಿಯೊಬ್ಬ ಪರಾರಿಯಾಗುತ್ತಿರುವ ದೃಶ್ಯ ಸೆರೆಯಾಗಿತ್ತು. ಆರೋಪಿಗಳ ಬಂಧನಕ್ಕೆ ಚುರುಕು ಕಾರ್ಯಾಚರಣೆ ನಡೆಸಿದ್ದ ಪೊಲೀಸರಿಗೆ ವಿಡಿಯೋ ಮತ್ತಷ್ಟು ಶಾಕ್ ನೀಡಿದೆ.
https://www.facebook.com/naveen.dalal.9406/videos/2198919687054592/
ಆರೋಪಿಗಳು ಹೇಳಿದ್ದು ಏನು?
ನಾವು ದೇಶದ ಸುಪ್ರಿಂ ಕೋರ್ಟ್ ಹಾಗೂ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಕೆಲವರು ದೇಶಕ್ಕೆ ಮಾರಕವಾಗಿ ಬೆಳೆಯುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲು ಸಂವಿಧಾನದಲ್ಲಿ ಯಾವುದೇ ಅವಕಾಶಗಳಿಲ್ಲ. ಇಂತವರಿಗೆ ಸೂಕ್ತ ಶಿಕ್ಷೆ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡಿಕೊಳ್ಳುತ್ತಿದ್ದವೆ. ಜೆಎನ್ಯು ವಿದ್ಯಾರ್ಥಿ ಸಂಘಟನೆ ದೇಶಕ್ಕೆ ಮಾರಕವಾಗಿ ಬೆಳೆಯುತ್ತಿದೆ. ಅಲ್ಲದೆ ಇವರು ಸಂಘಟನೆಯನ್ನು ಹೆಚ್ಚಿಸಿ ಅನೇಕರನ್ನು ದೇಶ ವಿರೋಧಿಗಳಾಗಿ ಸೃಷ್ಟಿಸುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ಶಿಕ್ಷೆ ನೀಡಬೇಕು ಎಂದು ಹರ್ಯಾಣದ ನಮ್ಮ ಹಿರಿಯರು ಹೇಳಿದ್ದರು ಎಂದು ದರ್ವೇಶ್ ಶಾಪುರ್ ಹೇಳಿದ್ದಾನೆ.
ನಮ್ಮನ್ನು ಬಂಧಿಸಲು ಯಾವುದೇ ಪರಿಶ್ರಮ ಪಡಬೇಕಾಗಿಲ್ಲ. ಆಗಸ್ಟ್ 17 ರಂದು ನಾವೇ ನಿಮಗೆ ಶರಣಾಗುತ್ತೇವೆ. ನೀವು ಒಂದು ವೇಳೆ ಬಂಧನಕ್ಕೆ ಮುಂದಾದರೆ ನಾವು ನಮ್ಮ ದಾರಿಯನ್ನು ಬರಲಿಸಬೇಕಾಗುತ್ತದೆ ಎಂದು ದರ್ಮೇಶ್, ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾನೆ.
ನವೀನ್ ದಲಾಲ್ ಮಾತನಾಡಿ, ನಮಗಾಗಿ ಈ ಕೃತ್ಯ ಎಸಗಿಲ್ಲ. ದೇಶದ ಜನತೆಗಾಗಿ ಹೀಗೆ ಮಾಡಿದ್ದೇವೆ. ಆತಂಕವಾದಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ. ಭಾರತದಲ್ಲಿ ಉಮರ್ ನಂತಹ ವ್ಯಕ್ತಿ ಇದ್ದರೆ ದೇಶ ಇಬ್ಬಾಗವಾಗುತ್ತದೆ. ಪಾಕಿಸ್ತಾನ ಜಿಂದಾಬಾದ್ ಎಂದು ಅವರು ಹೇಳುತ್ತಾರೆ. ಇದನ್ನು ನಾವು ಸಹಿಸುವುದಿಲ್ಲ ಎಂದಿದ್ದಾನೆ.

ಉಮರ್ ಪ್ರತಿಕ್ರಿಯೆ ಏನು?
ವಿಡಿಯೋದಲ್ಲಿ ಕೇಸರಿ ಬಣ್ಣದ ಬಟ್ಟೆ ಧರಿಸಿರುವ ವ್ಯಕ್ತಿಯೇ ನನ್ನ ಮೇಲೆ ಗುಂಡಿನ ದಾಳಿಗೆ ಯತ್ನಿಸಿದವನು. ಆತ ಈಗ ಕ್ಷೌರ ಮಾಡಿಸಿಕೊಂಡಿದ್ದಾನೆ ಅಷ್ಟೇ. ಪೊಲೀಸರು ಅವವನ್ನು ಹಿಡಿದು ತಂದರೆ ಆತನನ್ನು ಗುರುತಿಸುತ್ತೇನೆ ಎಂದು ಮೆಸೇಜ್ ಮೂಲಕ ಉಮರ್ ಖಾಲಿದ್ ಪೊಲೀಸರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಆರೋಪಿಗಳು ಹರಿಯಾಣ ಇಲ್ಲವೇ ಪಂಜಾಬ್ ಮೂಲದವರಾಗಿದ್ದು, ಅವರನ್ನು ಕೂಡಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply