ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲು

ವಿಜಯಪುರ: ಕೆರೆಯಲ್ಲಿ ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ನೀರು ಪಾಲಾಗಿರುವ ಘಟನೆ ಜಿಲ್ಲೆಯ ದೊಡ್ಡ ಕೆರೆಯಲ್ಲಿ ನಡೆದಿದೆ.

12 ವರ್ಷದ ಲೋಕೇಶ್ ನಾಗರಾಜ ತಟ್ಟಿ ಎಂಬ ಬಾಲಕನ ಶವ ಪತ್ತೆಯಾಗಿದ್ದು, ಮತ್ತೊಬ್ಬನ ಶವ ಪತ್ತೆಯಾಗದ ಕಾರಣ ಬಾಲಕನ ಗುರುತು ಪತ್ತೆಯಾಗಿಲ್ಲ. ಆದರೆ ಇಬ್ಬರು ಮೃತರು ಮುದ್ದೇಬಿಹಾಳ ನಿವಾಸಿಗಳಾಗಿದ್ದಾರೆ. ಮುದ್ದೇಬಿಹಾಳ ಪಟ್ಟಣದ ಇಂದಿರಾ ಸರ್ಕಲ್ ಬಳಿಯ ದೊಡ್ಡ ಕೆರೆಯಲ್ಲಿ ಈ ಘಟನೆ ಸಂಭವಿಸಿದೆ.

ಇಬ್ಬರು ಬಾಲಕರು ಶನಿವಾರ ಶಾಲೆ ಮುಗಿಸಿ ಮೀನು ಹಿಡಿಯಲು ಕೆರೆಗೆ ಹೋಗಿದ್ದಾರೆ. ಆದರೆ ಆಕಸ್ಮತಾಗಿ ಇಬ್ಬರು ಕಾಲುಜಾರಿ ಕೆರೆಗೆ ಬಿದ್ದಿದ್ದಾರೆ. ಸುತ್ತಮುತ್ತ ಇದ್ದವರು ನೋಡಿ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ವಿಚಾರ ತಿಳಿಸಿದ್ದಾರೆ.

ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬಳಿಕ ಅಗ್ನಿಶಾಮಕ ದಳದವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ಶನಿವಾರ ಸಂಜೆಯಿಂದ ಶವಕ್ಕಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ. ಆದರೆ ಒಬ್ಬನ ಮೃತದೇಹ ಪತ್ತೆಯಾಗಿದ್ದು, ರಾತ್ರಿಯಾದ ಕಾರಣ ಶೋಧಕಾರ್ಯ ಮಾಡಲು ಸಾಧ್ಯವಾಗಿಲ್ಲ. ಇಂದು ಮುಂಜಾನೆಯಿಂದಲೇ ಮತ್ತೊಬ್ಬ ಬಾಲಕನ ಮೃತದೇಹಕ್ಕಾಗಿ ಅಗ್ನಿಶಾಮಕ ದಳ ಶೋಧಕಾರ್ಯ ನಡೆಸುತ್ತಿದೆ.

ಈ ಘಟನೆ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *