ರಾಜೀನಾಮೆ ಸರಿಯೇ? ತಪ್ಪೇ? – ವ್ಯಾಕರಣ ಮೇಸ್ಟ್ರು Vs ಕಾನೂನು ಮೇಸ್ಟ್ರು

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಮಾಜಿ ಸಚಿವ ಸುರೇಶ್ ಕುಮಾರ್ ಅವರ ನಡುವೆ ಟ್ವಿಟ್ಟರಿನಲ್ಲಿ ವಾರ್ ಆರಂಭಗೊಂಡಿದೆ.

ಶಾಸಕರು ರಾಜೀನಾಮೆ ನೀಡಿದ್ದಕ್ಕೆ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೇ ಕಾರಣ ಎಂದು ಆರೋಪಿಸಿದ್ದರು. ಸಿದ್ದರಾಮಯ್ಯ ಅವರು ಪುನಃ ಮೋದಿ ಅವರ ಹೆಸರು ಹೇಳಿದ್ದಕ್ಕೆ ಸುರೇಶ್ ಕುಮಾರ್ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.

ಸುರೇಶ್ ಕುಮಾರ್ ಅವರು ಸೋಮವಾರ ತಮ್ಮ ಟ್ವಿಟ್ಟರಿನಲ್ಲಿ, “ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ತಿಂದದ್ದು ಜೀರ್ಣವಾಯಿತು. ಏಕೆಂದರೆ ಮತ್ತೆ ಮೋದಿಯವರ ಮೇಲೆ ಟೀಕೆ ಮಾಡಿ ಆಯಿತು” ಎಂದು ಟ್ವೀಟ್ ಮಾಡಿದ್ದರು.

ಈ ಟ್ವೀಟ್‍ಗೆ ಸಿದ್ದರಾಮಯ್ಯ ಇಂದು ರೀ-ಟ್ವೀಟ್ ಮಾಡುವ ಮೂಲಕ ಸುರೇಶ್ ಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. “ಸುರೇಶ್ ಅವರು ರಾತ್ರಿ ತಿಂದದ್ದು ಇಂದು ಬೆಳಿಗ್ಗೆ ನಿತ್ಯಕರ್ಮದಲ್ಲಿ ನಿರ್ಗಮನವಾಯಿತು. ಏಕೆಂದರೆ ಬೆಳಿಗ್ಗೆ ಅರ್ಧಗಂಟೆ ಅವರು ಮೋದಿ ಭಜನೆ ಮಾಡಿ ಆಯಿತು” ಎಂದು ಬರೆದು ಟಾಂಗ್ ಕೊಟ್ಟಿದ್ದಾರೆ.

ಇದಕ್ಕೆ ಸುರೇಶ್ ಕುಮಾರ್, “ವ್ಯಾಕರಣ ಮೇಸ್ಟ್ರೇ. ಆ ಕೆಲವು ಶಾಸಕರು ರಾಜಿನಾಮೆ ನೀಡಿರುವುದು ತಮ್ಮ ಶಾಸಕ ಸ್ಥಾನಕ್ಕೆ, ತಮ್ಮ ಪಕ್ಷಕ್ಕಲ್ಲ(ಕಾಂಗ್ರೆಸಿಗಲ್ಲ). ಇದು ಹೇಗೆ ಪಕ್ಷಾಂತರ ವಿರೋಧಿ ಕಾಯ್ದೆ ಉಲ್ಲಂಘನೆ ಆಗುತ್ತದೆ? ಅವರ ವಿರುದ್ಧ ಯಾವುದೇ ಕ್ರಮ ಸಾಧ್ಯವೇ?” ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ.

ಈ ಟ್ವೀಟ್‍ಗೆ ಸಿದ್ದರಾಮಯ್ಯ, “ಕಾನೂನಿನ ಮೇಷ್ಟ್ರೇ, ಸುರೇಶ್ ಶಾಸಕರು ತಮ್ಮ ಪಕ್ಷದ ವಿರುದ್ಧ ಬಹಿರಂಗವಾಗಿ ಮಾತನಾಡಿದರೆ ಇಲ್ಲವೇ ಇನ್ನೊಂದು ಪಕ್ಷ ಸೇರಿದರೆ, ಅದನ್ನು ರಾಜೀನಾಮೆ ಎಂದು ತೀರ್ಮಾನಿಸಿ ಅವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಕ್ರಮಕೈಗೊಳ್ಳಬಹುದು ಎಂದು ನ್ಯಾಯಾಲಯದ ತೀರ್ಪುಗಳು ಹೇಳಿವೆ. ಸ್ವಲ್ಪ ಓದಿಕೊಳ್ಳಿ” ಎಂದು ಫೋಟೋ ಹಾಕುವ ಮೂಲಕ ತಿರುಗೇಟು ನೀಡಿದ್ದಾರೆ.

Comments

Leave a Reply

Your email address will not be published. Required fields are marked *