ಟಿಬಿ ಡ್ಯಾಂ ನೀರು ಉಳಿಸಲು ಹರಸಾಹಸ – ಇಂದೇ ತಾತ್ಕಾಲಿಕ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯ

– 48 ಟನ್ ತೂಕದ ಗೇಟ್ ಸಿದ್ಧ, ತಯಾರಾದ ಗೇಟ್ ವೀಕ್ಷಿಸಲಿರುವ ಸಿಎಂ

ಕೊಪ್ಪಳ: ತುಂಗಭದ್ರಾ ಜಲಾಶಯದ (Tungabhadra Dam) 19ನೇ ಕ್ರಸ್ಟ್‌ ನೂತನ ಗೇಟ್ ಅಳವಡಿಸುವ ಕಾರ್ಯ ಮಂಗಳವಾರ ಸಂಜೆಯಿಂದ ಆರಂಭವಾಗಲಿದೆ.

ಸದ್ಯ ತಾತ್ಕಾಲಿಕ ಗೇಟ್ ಅಳವಡಿಕೆಗೆ ನಿರ್ಧರಿಸಲಾಗಿದ್ದು, ಸಂಜೆಯಿಂದಲೇ ಹೊಸ ಗೇಟ್ ಅಳವಡಿಕೆ ಕಾರ್ಯ ಆರಂಭವಾಗಲಿದೆ. ನೀರು ಖಾಲಿಯಾಗುತ್ತಿರುವ ಹಿನ್ನೆಲೆ ಮೊದಲೇ ತಾತ್ಕಾಲಿಕ ಗೇಟ್ ಅಳವಡಿಕೆ ಮಾಡಲು ಯತ್ನಿಸಲಾಗುತ್ತದೆ. ನೀರಲ್ಲಿಯೇ ಗೇಟ್ ಇಳಿಸಿ ಅಳವಡಿಕೆಗೆ ತಂತ್ರಜ್ಞರ ತಂಡ ಯತ್ನಿಸಲಿದೆ ಎಂದು ತಿಳಿದುಬಂದಿದೆ.

ಹೊಸಪೇಟೆ ಮತ್ತು ಹೊಸಳ್ಳಿಯಲ್ಲಿ ಹೊಸ ಗೇಟ್ ತಯಾರಾಗುತ್ತಿದ್ದು, ನಾರಾಯಣ ಎಂಜಿನಿಯರ್ಸ್, ಹಿಂದೂಸ್ತಾನ್ ಎಂಜಿನಿಯರ್ಸ್, ಜಿಂದಾಲ್‍ನ ತಂತ್ರಜ್ಞರ ತಂಡದಿಂದ ಕೆಲಸ ನಡೆಯುತ್ತಿದೆ. ಕನ್ನಯ್ಯನಾಯ್ಡು ನೇತೃತ್ವದಲ್ಲಿ 20 ಅಡಿ ಅಗಲ 60 ಅಡಿ ಎತ್ತರದ ಗೇಟ್ ತಯಾರಾಗುತ್ತಿದೆ. ಹಂತ ಹಂತವಾಗಿ 4 ಅಡಿ ಅಗಲ, 12 ಅಡಿ ಎತ್ತರದ ಕಬ್ಬಿಣದ ಐದು ಹಲಗೆಗಳನ್ನು ತಯಾರು ಮಾಡಲಾಗಿದೆ. 48 ಟನ್ ತೂಕದ ಗೇಟ್‍ನ್ನು ಡ್ಯಾಂ ನಲ್ಲಿ ತೆಗೆದುಕೊಂಡು ಹೋಗಲು ಅಸಾಧ್ಯ. ಈ ಕಾರಣಕ್ಕಾಗಿಯೇ 5 ಭಾಗಗಳಲ್ಲಿ ಗೇಟ್ ಸಿದ್ಧತೆ ಕಾರ್ಯ ನಡೆಯುತ್ತಿದೆ. ಗೇಟ್ ಅಳವಡಿಕೆ ಯಶಸ್ವಿಯಾದ್ರೆ ಅಪಾರ ಪ್ರಮಾಣದ ನೀರು ಉಳಿಯಲಿದೆ. ಈಗಾಗಲೇ ಡ್ಯಾಂನಿಂದ ನದಿಗಳ ಮೂಲಕ 22 ಟಿಎಂಸಿ ನೀರು ಹರಿದು ಹೋಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇನ್ನೂ ತಯಾರಾದ ಗೇಟ್‍ಗಳನ್ನು ಸಿಎಂ ಸಿದ್ದರಾಮಯ್ಯ (Siddaramaiah) ಇಂದು (ಮಂಗಳವಾರ) ವೀಕ್ಷಿಸಲಿದ್ದಾರೆ. ಬಳಿಕ ತಯಾರಾದ ಹಲಗೆಗಳ ಜೋಡಣೆ, ಜಲಾಶಯಕ್ಕೆ ಅಳವಡಿಸುವ ಬಗ್ಗೆ ಅಧಿಕಾರಿಗಳು ಹಾಗೂ ತಂತ್ರಜ್ಞರ ತಂಡದ ಜೊತೆ ಚರ್ಚಿಸಲಿದ್ದಾರೆ.

ಡ್ಯಾಂ ಗೇಟ್‌ ದುರಸ್ತಿಗೆ 2 ಪ್ಲ್ಯಾನ್‌

ಪ್ಲ್ಯಾನ್‌ 1: ನೀರಿಗಿಳಿದು ದುರಸ್ತಿ ಕಾರ್ಯ ನಡೆಸುವುದಾಗಿ ಜಿಂದಾಲ್‌ ತಂಡ ಮುಂದೆ ಬಂದಿದೆ. ಈ ಯೋಜನೆಗೆ ಮೊದಲ ಆದ್ಯತೆ.

ಪ್ಲ್ಯಾನ್‌ 2: ನೀರಿನ ರಭಸ ಜಾಸ್ತಿಯಾಗಿ ನೀರಿಗಿಳಿಯಲು ಸಾಧ್ಯವಾಗದೆ ಇದ್ರೆ, ಅರ್ಧ ನೀರು ಖಾಲಿ ಮಾಡಿ ದುರಸ್ತಿ ಕಾರ್ಯ