ಮೂರು ಜಿಲ್ಲೆಗಳ ಜೀವನಾಡಿಯಾದ ತುಂಗಭದ್ರಾ ಜಲಾಶಯ ಭರ್ತಿ- ರೈತರ ಮೊಗದಲ್ಲಿ ಸಂಭ್ರಮ

ಕೊಪ್ಪಳ: ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು ದಾಖಲಾಗುತ್ತಿದ್ದು, ಸದ್ಯ ಡ್ಯಾಂನಲ್ಲಿ 75 ಟಿಎಂಸಿಗೂ ಹೆಚ್ಚು ನೀರಿದೆ. ಈ ಬಾರಿ ಡ್ಯಾಂ ಭರ್ತಿಯಾಗುವ ಎಲ್ಲ ಸಾಧ್ಯತೆ ಇದೆ.

ಕಳೆದ ನಾಲ್ಕು ವರ್ಷದಿಂದ ಭರ್ತಿಯಾಗದ ತುಂಗಭದ್ರಾ ಜಲಾಶಯದಲ್ಲಿ ಈಗಾಗಲೇ 75 ಟಿಎಂಸಿ ನೀರು ಸಂಗ್ರಹವಾಗಿರುವುದು ರೈತರ ಮೊಗದಲ್ಲಿ ಸಂಭ್ರಮ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ನಡೆಯುವ ಟಿಬಿ ಡ್ಯಾಂ ನೀರಾವರಿ ಸಲಹಾ ಸಮಿತಿ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ.

ಮೂರು ಜಿಲ್ಲೆ ಸೇರಿ ಆಂಧ್ರಕ್ಕೆ ಎಂದಿನಿಂದ ನೀರು ಹರಿಸಬೇಕು ಎಂಬುದನ್ನು ಸಭೆಯಲ್ಲಿ ತೀರ್ಮಾನಿಸಲಾಗುತ್ತದೆ. ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಒಟ್ಟು 133 ಟಿಎಂಸಿ ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಸುಮಾರು 33 ಟಿಎಂಸಿಯಷ್ಟು ಹೂಳು ತುಂಬಿದೆ. ಇದರಿಂದ ಸದ್ಯ ಡ್ಯಾಂನ ನೀರು ಸಂಗ್ರಹ ಸಾಮರ್ಥ್ಯ 100 ಟಿಎಂಸಿಗೆ ಕುಸಿದಿದೆ.

ಈ ಹಿಂದಿನ ವರ್ಷದ ಇದೇ ದಿನ ಡ್ಯಾಂನಲ್ಲಿ ಕೇವಲ 17 ಟಿಎಂಸಿ ನೀರಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಡ್ಯಾಂನಲ್ಲಿ ನಾಲ್ಕು ಪಟ್ಟು ಹೆಚ್ಚು ನೀರಿದೆ.

Comments

Leave a Reply

Your email address will not be published. Required fields are marked *