ಬೇರೆಯವರ ಪತ್ನಿ ಮೇಲೆ ಕಣ್ಣು- ಸಂಸಾರದಲ್ಲಿ ಹುಳಿ ಹಿಂಡುವ ಕೆಲಸ ಮಾಡ್ತಾನೆ ಈ ಭೂಪ

ತುಮಕೂರು: ತನ್ನ ಹೆಂಡತಿಯನ್ನು ಬಿಟ್ಟು ಬೇರೆಯವರ ಹೆಂಡತಿ ಬಗ್ಗೆ ಇಲ್ಲೊಬ್ಬ ತಲೆ ಕೆಡಿಸಿಕೊಂಡು ಕಿರುಕುಳ ನೀಡುತ್ತಿದ್ದಾನೆ, ಮಹಿಳೆಯ ಮೇಲೆ ಹದ್ದಿನ ಕಣ್ಣಿಟ್ಟಿರುವ ಈತ ಆಕೆಯ ಫೋನ್ ಕಾಲ್ ಡೀಟೆಲ್ಸ್ ತೆಗೆದು ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಜಿಲ್ಲೆಯ ಉಪ್ಪಾರಹಳ್ಳಿಯ ನಿವಾಸಿಯಾಗಿರುವ ಸುಹೇಲ್ ಎಂಬಾತ ಜ್ಯೋತಿ (ಹೆಸರು ಬದಲಾಯಿಸಲಾಗಿದೆ) ಎಂಬವರಿಗೆ ಕಿರುಕುಳ ನೀಡುತ್ತಿದ್ದಾನೆ. ಈ ಸಂಬಂಧ ದೂರು ನೀಡಿದ್ರೂ ಪ್ರಕರಣ ದಾಖಲಿಸಿಕೊಳ್ಳದ ಪೊಲೀಸರು ರಾಜಿಗೆ ಮುಂದಾಗುತ್ತಿದ್ದಾರೆ ಎಂದು ಜ್ಯೋತಿ ಆರೋಪಿಸಿದ್ದಾರೆ.

ಉಪ್ಪಾರಹಳ್ಳಿಯ ನಿವಾಸಿಯಾಗಿರುವ ಸುಹೇಲ್ ಮತ್ತು ಜ್ಯೋತಿ ಪರಿಚಯಸ್ಥರು. ತಾನೋರ್ವ ಪೊಲೀಸ್ ಮಾಹಿತಿದಾರ ಎಂದು ಹೇಳಿಕೊಳ್ಳುವ ಸುಹೇಲ್, ವಿವಾಹಿತ ಮಹಿಳೆಗೆ ಕಾರಣವಿಲ್ಲದೇ ಕಿರುಕುಳ ನೀಡುತ್ತಿದ್ದಾನೆ. ಕಳೆದ ಒಂದು ತಿಂಗಳಿನಿಂದ ಜ್ಯೋತಿ ಮೇಲೆ ಹದ್ದಿನ ಕಣ್ಣು ಇಟ್ಟಿದ್ದಾನೆ. ಜ್ಯೋತಿ ಯಾರ ಜೊತೆ ಮಾತನಾಡಿದರೂ ಅನುಮಾನ ಪಡುವ ಸುಹೇಲ್ ಮಹಿಳೆಯ ಗಂಡನಿಗೆ ಚಾಡಿ ಹೇಳುವ ಕೆಲಸ ಮಾಡುತ್ತಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿವೆ.

ಪೊಲೀಸರ ಸಹಾಯದಿಂದ ಜ್ಯೋತಿಯವರ ಕಾಲ್ ಲಿಸ್ಟ್ ತೆಗೆದು ನಿನ್ನ ಪತ್ನಿ ದಾರಿ ತಪ್ಪುತಿದ್ದಾಳೆ ಕಂಡಕಂಡವರ ಜೊತೆ ಮಾತನಾಡುತ್ತಾಳೆ ಎಂದು ಸಂಸಾರದಲ್ಲಿ ಹುಳಿ ಹಿಂಡುತಿದ್ದಾನೆ. ಜ್ಯೋತಿ ಪತಿ ಸುಹೇಲ್‍ನ ದೂರಿಗೆ ತಲೆ ಕೆಡಿಸಿಕೊಳ್ಳದಿದ್ದರೂ ಪದೇ ಪದೇ ಫೋನ್ ಮಾಡಿ ಚಾಡಿ ಹೇಳುತಿದ್ದಾನೆ. ಈತನ ಹುಚ್ಚು ವರ್ತನೆಯಿಂದ ಕುಟುಂಬದಲ್ಲಿ ನೆಮ್ಮದಿಯೇ ಮಾಯವಾಗಿದೆ ಎಂದು ಜ್ಯೋತಿ ಕಣ್ಣೀರು ಹಾಕುತ್ತಿದ್ದಾರೆ.

ಸುಹೇಲ್‍ನ ಹುಚ್ಚಾಟ ಇಷ್ಟಕ್ಕೆ ಮುಗಿದಿಲ್ಲ. ಸಿಕ್ಕ ಸಿಕ್ಕ ಕಡೆಯೆಲ್ಲ ಜ್ಯೋತಿಯನ್ನು ನಿಲ್ಲಿಸಿ ಅವಮಾನಿಸುತ್ತಾನಂತೆ. ನೀನು ಬೇರೆ ಗಂಡಸರ ಜೊತೆ ಮಾತನಾಡಬಾರದು. ಹಾಗೆ ಮಾಡಿದ್ರೆ ನಿನ್ನ ಸಾಯಿಸ್ತಿನಿ ಬಿಡ್ತಿನಿ ಎಂದು ಚಾಕು ಚೂರಿ ತೋರಿಸಿ ಕೊಲೆ ಬೆದರಿಕೆ ಹಾಕ್ತಾನೆ. ಮನೆ ಬಳಿ ಬಂದು ಅವಾಚ್ಯವಾಗಿ ನಿಂದಿಸುತ್ತಾನೆ ಎಂದು ಜ್ಯೋತಿ ತಾಯಿ ಹೇಳುತ್ತಾರೆ.

ಸುಹೇಲ್‍ನ ಕಿರುಕುಳದ ಬಗ್ಗೆ ಜಯನಗರ ಠಾಣೆಗೆ ದೂರು ನೀಡಲಾಗಿದೆ. ಆದರೆ ಪೊಲೀಸರು ಎಫ್‍ಐಆರ್ ಮಾಡುವ ಬದಲು ರಾಜಿ ಸಂಧಾನ ಮಾಡಲು ಯತ್ನಿಸುತಿದ್ದಾರೆ. ಸುಹೇಲ್‍ನ ಕಿರುಕುಳದಿಂದ ನಮಗೆ ಮುಕ್ತಿ ನೀಡಿ ಎಂದು ಜ್ಯೋತಿ ಕೇಳಿಕೊಳ್ಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *