ಕನ್ನಡ ಭಾಷೆ ಮೇಲೆ ಪ್ರಹಾರ ಮಾಡಿದರೆ ನಾವು ಸಹಿಸಲ್ಲ: ಮಾಧುಸ್ವಾಮಿ

– ಅಮಿತ್ ಶಾ ಹಿಂದಿ ಹೇರಿಕೆ ಮಾಡ್ಬೇಕು ಎಂದು ಹೇಳಿಲ್ಲ

ತುಮಕೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ತಮ್ಮ ಭಾಷಣದಲ್ಲಿ ಹಿಂದಿ ಭಾಷೆಯನ್ನು ಹೇರಿಕೆ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ದೇಶಕ್ಕೊಂದು ಸ್ವಂತಭಾಷೆ ಬೇಕು, ಪರಕೀಯ ಭಾಷೆಗೆ ಒಳಗಾಗಬಾರದು ಎಂದಿದ್ದಾರಷ್ಟೇ ಎಂದು ಅಮಿತ್ ಷಾ ಹೇಳಿಕೆಯನ್ನು ಕಾನೂನು ಮತ್ತು ಸಂಸದೀಯ ಸಚಿವ ಮಾಧುಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಅಮಿತ್ ಷಾ ಅವರ ಭಾಷಣವನ್ನು ನಾನು ಸಂಪೂರ್ಣ ಕೇಳಿದ್ದೇನೆ. ಅವರು ಎಲ್ಲೂ ಹೇರಿಕೆ ವಿಚಾರ ಮಾತಾಡಿಲ್ಲ. ಪ್ರಾದೇಶಿಕ ಭಾಷೆಗಳ ಜೊತೆಜೊತೆಗೆ ದೇಶಕ್ಕೆ ಒಂದು ಸ್ವಂತ ಭಾಷೆ ಬೇಕು ಎಂದಿದ್ದಾರೆ ಅಷ್ಟೆ. ಹಾಗಂತ ಭಾಷೆ ಹೇರಿದರೆ ಯಾರೂ ಸಹಿಸಿಕೊಳ್ಳಲ್ಲ ಎಂದು ಹೇಳಿದರು.

ನಾವು ಕನ್ನಡ ಅಭಿಮಾನಿಗಳು ಕನ್ನಡ ಭಾಷೆ ಮೇಲೆ ಪ್ರಹಾರ ಮಾಡಿದರೆ ನಾವು ಸಹಿಸಲ್ಲ ಎಂದು ಕನ್ನಡ ಪರ ನಿಂತರು. ಇದೇ ವೇಳೆ ಟ್ರಾಫಿಕ್ ದಂಡ ಪರಿಷ್ಕರಣೆ ವಿಚಾರ ಮಾತನಾಡಿದ ಅವರು, ಕೇಂದ್ರ ದಂಡದ ಹಣವನ್ನು ಜಾಸ್ತಿ ಮಾಡಿದ್ದು, ಆದಾಯ ಮಾಡಬೇಕು ಎಂದು ಅಲ್ಲ. ಜನರಿಗೆ ನಿಯಮದ ಮೇಲೆ ಭಯ ಇರಲಿ ಎಂದು. ಈಗ ದಂಡ ಜಾಸ್ತಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ. ಮುಂದಿನ ಮೂರ್ನಾಲ್ಕು ದಿನದಲ್ಲಿ ಪರಿಷ್ಕರಣೆ ಆಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಮಧ್ಯಂತರ ಚುನಾವಣೆಗೆ ಕಾಂಗ್ರೆಸ್ ತಯಾರಿ ವಿಚಾರದಲ್ಲಿ ಪ್ರತಿಕ್ರಿಯಿಸಿದ ಮಾಧುಸ್ವಾಮಿ, ಕಾಂಗ್ರೆಸ್ ನವರು ಒಳ್ಳೆ ವಿದ್ಯಾರ್ಥಿಗಳಿದ್ದ ಹಾಗೆ, ಪರೀಕ್ಷೆಗೆ ದಿನಾಲೂ ಓದುತ್ತಿದ್ದಾರೆ. ಪರೀಕ್ಷೆಗೆ ತಯಾರಿ ನಡೆಸಲಿ ಬಿಡಿ ತಪ್ಪೇನಿದೆ ಎಂದು ಟಾಂಗ್ ಕೊಟ್ಟರು.

Comments

Leave a Reply

Your email address will not be published. Required fields are marked *