ತುಮಕೂರಲ್ಲಿ ಬೆಳ್ಳಂಬೆಳಗ್ಗೆ ದಟ್ಟ ಮಂಜು- ಪರದಾಡಿದ ವಾಹನ ಸವಾರರು

ತುಮಕೂರು: ಜಿಲ್ಲೆಗೆ ಇಂದು ಭಾಗಶಃ ಮಂಜಿನ ಮುಸುಕು ಧರಿಸಿತ್ತು. ಬೆಳಗ್ಗಿನ ಜಾವ ಆವರಿಸಿದ ಮಂಜು ತಣ್ಣನೆಯ ಅನುಭವದೊಂದಿಗೆ ಒಂದಿಷ್ಟು ಕಿರಿಕಿರಿಯನ್ನೂ ನೀಡಿತ್ತು. ತುಮಕೂರು ನಗರ, ನಾಮದ ಚಿಲುಮೆ, ಗುಬ್ಬಿಯ ದೊಡ್ಡಗುಣಿ, ಕುಣಿಗಲ್ ತಾಲೂಕಿನಾದ್ಯಂತ ಬೆಳಗ್ಗೆ 8-30ರ ವರೆಗೆ ಸೂರ್ಯನ ದರ್ಶನವಾಗಿಲ್ಲ. ಅಷ್ಟರ ಮಟ್ಟಿಗೆ ದಟ್ಟವಾದ ಮಂಜು ಮುಸುಕಿತ್ತು.

ವಾತಾವರಣದಲ್ಲಿ ಮಂಜು ಮುಸುಕಿರೋದರ ಆಹ್ಲಾದ, ತಣ್ಣನೆಯ ಅನುಭವವನ್ನು ಪಡೆದ ಜನರು, ಕೆಲ ಹೊತ್ತು ಖುಷಿಯಿಂದ ಕಾಲ ಕಳೆದರು. ಜಾಗಿಂಗ್ ಹೋಗಿದ್ದೋರು ಚುಮುಚುಮು ಚಳಿ, ಮಂಜಿನ ಮಬ್ಬಿನಲ್ಲಿ ಹೆಜ್ಜೆ ಇಟ್ಟಿದ್ದಾರೆ. ಕಾಡಂಚಿನ ಪ್ರದೇಶಗಳು, ಬೆಟ್ಟ-ಗುಡ್ಡಗಳು ಶುಭ್ರವಾದ ಶ್ವೇತವರ್ಣದ ಚಾದರ ಹೊದ್ದಂತೆ ಕಂಗೊಳಿಸುತ್ತಿತ್ತು. ಬೆಳ್ಳಂಬೆಳಗ್ಗೆ ಚಿಲಿಪಿಲಿಯಾಡಬೇಕಿದ್ದ ಪಕ್ಷಿಗಳು ಶೀತದ ಪರಿಣಾಮ ಕೊಂಚ ತಡವಾಗಿ ಸದ್ದು ಮಾಡಿದವು.

ಮಂಜು ಮುಸುಕಿದ್ದರ ಪರಿಣಾಮ ವಾಹನ ಸವಾರರು ಕಿರಿಕಿರಿ ಅನುಭವಿಸುವಂತಾಯಿತು. ವಾಹನ ಹೋಗಲು ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲವಾದ್ದರಿಂದ ವೇಗವಾಗಿ ವಾಹನ ಚಲಿಸಲು ಆಗಿಲ್ಲ. ಬೆಳಗ್ಗೆ 9 ಗಂಟೆ ನಂತರ ನಿಧಾನವಾಗಿ ಸೂರ್ಯನ ದರ್ಶನವಾಯಿತು. ಆ ನಂತರ ವಾತಾವರಣ ಸಹಜ ಸ್ಥಿತಿಗೆ ಬಂದಿದೆ.

Comments

Leave a Reply

Your email address will not be published. Required fields are marked *