ಮಸಾಲೆ ಜಯರಾಮ್ ಮೇಲೆ ಮುಗಿಬಿದ್ದ ಜೆಡಿಎಸ್ ಕಾರ್ಯಕರ್ತರು

ತುಮಕೂರು: ರಸ್ತೆ ಮತ್ತು ಚರಂಡಿ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಫೈಟ್ ನಡೆದಿದೆ. ಬಿಜೆಪಿ ಶಾಸಕರ ಮೇಲೆ ಜೆಡಿಎಸ್ ಕಾರ್ಯಕರ್ತರು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.

ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಸಂಪಿಗೆ ಹೊಸಳ್ಳಿಯ ಕುರುಬರಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ಶಾಸಕ ಮಸಾಲೆ ಜಯರಾಮ್ ಮೇಲೆ ಜೆಡಿಎಸ್ ಕಾರ್ಯಕರ್ತರು ಮುಗಿಬಿದ್ದು ತಳ್ಳಾಟ ನೂಕಾಟ ನಡೆಸಿದ್ದಾರೆ. ಶಾಸಕರ ಮೇಲೆ ಕೈ ಕೈ ಮಿಲಾಯಿಸಲೂ ಮುಂದಾಗಿದ್ದಾರೆ.

ಈ ವೇಳೆ ಶಾಸಕರ ರಕ್ಷಣೆ ನೀಡಿ ಬಿಜೆಪಿ ಮುಖಂಡರು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಕುರುಬರಹಳ್ಳಿಯಲ್ಲಿ ಕಾಂಕ್ರಿಟ್ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಮೊದಲು ಚರಂಡಿಮಾಡಿ ಎಂದು ಜೆಡಿಎಸ್ ಕಾರ್ಯಕರ್ತರ ಬೇಡಿಕೆ ಇಟ್ಟಿದ್ದಾರೆ. ಚರಂಡಿ ಮಾಡುತ್ತೇವೆ ಎಂದು ಶಾಸಕರು ಭರವಸೆ ಕೊಟ್ಟರೂ ಸುಮ್ಮನಾಗದ ಜೆಡಿಎಸ್ ಕಾರ್ಯಕರ್ತರು ಶಾಸಕರೊಂದಿಗೆ ವಾಗ್ವಾದ ಮಾಡಿದ್ದಾರೆ. ಪರಿಣಾಮ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಈ ಗಲಾಟೆಯಲ್ಲಿ ಮೊದಲು ಜೆಡಿಎಸ್ ಕಾರ್ಯಕರ್ತರು ರಾಜಕಾರಣ ಮಾಡಬೇಡಿ. ಮೊದಲು ಊರು ಸರಿ ಮಾಡಿ ಎಂದು ಕೇಳಿದ್ದಾರೆ. ಇದಕ್ಕೆ ಜಯರಮ್ ನನಗೆ ರಾಜಕಾರಣ ಮಾಡೋದು ಗೊತ್ತು. ಊರು ಅಭಿವೃದ್ಧಿ ಮಾಡೋದು ಗೊತ್ತು ಎಂದು ಹೇಳಿದ್ದಾರೆ. ಇದಕ್ಕೆ ಜೆಡಿಎಸ್ ಕಾರ್ಯಕರ್ತರು ಏನ್ ಮಾಡಿದ್ದೀರಾ ನೀವು ಎಂದು ಜಗಳ ತೆಗೆದಿದ್ದಾರೆ. ಇದಕ್ಕೆ ಕೋಪಗೊಂಡ ಜಯರಾಮ್ ಏನ್ ನೀವು ಮೈಮೇಲೆ ಬಂದರೆ ನಾನು ಓಡಿಹೋಗ್ತಿನಾ ಎಂದು ಕೇಳಿದ್ದಾರೆ. ಇದಕ್ಕೆ ಸಿಟ್ಟಿಗೆದ್ದ ಕಾರ್ಯಕರ್ತರು ನಾವು 12 ಜನ ಶಾಸಕರನ್ನು ನೋಡಿದ್ದೇವೆ ನೀವ್ ಅದರಲ್ಲಿ ಒಬ್ಬರು ಎಂದು ಅವಾಜ್ ಹಾಕಿದ್ದಾರೆ.

Comments

Leave a Reply

Your email address will not be published. Required fields are marked *