ತುಮಕೂರಿನಲ್ಲಿ ಡಾಕ್ಟರ್ ಎಡವಟ್ಟು- ಯುವಕನ ಮೂಳೆ ಮುರಿತಕ್ಕಿಲ್ಲ ಸೂಕ್ತ ಚಿಕಿತ್ಸೆ

– ನ್ಯಾಯ ಕೇಳಿದ್ದಕ್ಕೆ ರೌಡಿ ಡಾಕ್ಟರ್ ಅವಾಜ್

ತುಮಕೂರು: ಬೈಕಿನಿಂದ ಬಿದ್ದು ಹುಡುಗನ ಮೊಣ ಕೈ ಮೂಳೆ ಮುರಿದಿತ್ತು. ಶಸ್ತ್ರ ಚಿಕಿತ್ಸೆ ಮಾಡಿ ಯಥಾಸ್ಥಿತಿಗೂ ತರಲಾಗಿತ್ತು. ಇನ್ನೇನು ಕೈ ಸರಿಹೋಯ್ತು ಅನ್ನೋಷ್ಟರಲ್ಲಿ ವೈದ್ಯರ ಎಡವಟ್ಟಿನಿಂದಾಗಿ ಆ ಹುಡುಗ ಮತ್ತೆ ಕೊರಗುವಂತಾಗಿದೆ.

ಹೌದು. ತುಮಕೂರಿನ ರಾಜೀವ್ ಗಾಂಧಿ ನಗರದ ಯುವಕ ವಾಸೀಂ ಪಾಷಾಗೆ ಬೈಕಿನಿಂದ ಬಿದ್ದು ಮೊಣಕೈ ಮುರಿದಿತ್ತು. ಹೀಗಾಗಿ ಯುವಕನನ್ನು ತುಮಕೂರು ನಗರದ ಮಂಜುನಾಥ ನಗರದಲ್ಲಿರುವ ಸುಕೃತ ಆಸ್ಪತ್ರೆಗೆ ಕರೆದೊಯ್ದಿದ್ದರು. ವಾಸೀಂ ಪಾಷಾನ ಕಂಡಿಷನ್ ನೋಡಿದ್ದ ಡಾಕ್ಟರ್ ಶ್ರೀನಿವಾಸ್ ತಕ್ಷಣ ಸರ್ಜರಿ ಮಾಡಲೇಬೇಕು. ಇಲ್ಲಾಂದ್ರೆ ತುಂಬಾ ಪ್ರಾಬ್ಲಂ ಆಗುತ್ತೆ ಅಂತ 35 ಸಾವಿರ ರೂಪಾಯಿ ಪೀಕಿ ಸರ್ಜರಿಯನ್ನೂ ಮಾಡಿದ್ದರು. ಆದರೆ ಪದೇ ಪದೇ ರಕ್ತಸ್ರಾವವಾಗುತ್ತಾ ಕೀವು ಸೇರಿ, ನೋವು ಬಂದಿದೆ. ಸರ್ ಹೀಗಾಗಿದ್ಯಲ್ಲ ಅಂದ್ರೆ ಇದೆಲ್ಲಾ ಕಾಮನ್ ಧೈರ್ಯ ತಗೋ ಅಂತ ಡಾ. ಶ್ರೀನಿವಾಸ್ ಹೇಳಿರುವುದಾಗಿ ವಾಸೀಂ ತಿಳಿಸಿದ್ದಾರೆ.

ಕೈನೋವು ತಾಳಲಾರದೆ ಮತ್ತೆ ಆಸ್ಪತ್ರೆಗೆ ಹೋದ್ರೆ, ಡಾಕ್ಟರ್ ಶ್ರೀನಿವಾಸ್ ಮಾತ್ರ ಇಲ್ಲಿ ವಾಸಿ ಮಾಡೋಕೆ ಸಾಧ್ಯವೇ ಇಲ್ಲ. ಬೇರೆ ಕಡೆ ಹೋಗಿ ಬೇಕಾದ್ರೆ 5 ಲಕ್ಷ ಹಣವನ್ನು ನಾನೇ ಕೊಡ್ತೀನಿ. ಇದನ್ನು ಯಾರ ಬಳಿಯೂ ಹೇಳಲು ಹೋಗಬೇಡಿ ಅಂತ ಮೊದಲಿಗೆ ನೈಸ್ ಮಾಡಿದ್ದಾರೆ. ಆ ನಂತರ ನಂಗೆ ಎಂಎಲ್‍ಎ ಗೊತ್ತು, ಎಂಪಿ ಗೊತ್ತು, ಹಣನೂ ಕೊಡಲ್ಲ, ಏನೂ ಕೊಡಲ್ಲ. ಏನ್ ಮಾಡ್ಕೋತ್ತೀರೋ ಮಾಡ್ಕಳಿ ಅಂತ ಅವಾಜ್ ಹಾಕಿರುವುದಾಗಿ ವಾಸೀಂ ತಾಯಿ ಆರೋಪಿಸಿದ್ದಾರೆ. ಅಲ್ಲದೆ ಬೇರೆ ಡಾಕ್ಟರ್‍ಗೆ ತೋರಿಸಿದ್ರೆ ವಾಸೀಂ ಕೈಮೂಳೆಯನ್ನು ಹುಳುಗಳು ತಿಂದಿವೆ. ಹಾಗಾಗಿ ಅವರ ಕೈ ಸರಿ ಹೋಗುವುದು ಕಷ್ಟ ಅಂತ ಹೇಳಿದ್ದಾರಂತೆ.

ಒಟ್ಟಿನಲ್ಲಿ ಜೀವ ಉಳಿಸಿ ನೊಂದವರ ಪಾಲಿಗೆ ನಂದಾದೀಪವಾಗಬೇಕಿದ್ದ ವೈದ್ಯ ಶ್ರೀನಿವಾಸ್ ಇಲ್ಲಿ ತಪ್ಪಿತಸ್ಥನಾಗಿರೋದು ಮೇಲ್ನೋಟಕ್ಕೆ ಕಾಣುತ್ತಿದೆ. ಹೀಗಾಗಿ, ನೊಂದ ಯುವಕ ವಾಸೀಂಗೆ ನ್ಯಾಯ ಒದಗಿಸಬೇಕಿದೆ.

Comments

Leave a Reply

Your email address will not be published. Required fields are marked *