ಟ್ರ್ಯಾಕ್ಟರ್ ಅಪಘಾತ ತಪ್ಪಿಸಲು ಹೋಗಿ ಬೈಕ್ ಸವಾರನ ಮೇಲೆ ಹರಿದ ಲಾರಿ

ರಾಯಚೂರು: ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಲಾರಿಯೊಂದು ಬೈಕ್ ಸವಾರನ ಮೇಲೆ ಹರಿದಿದ್ದು, ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಮಂತ್ರಾಲಯ ರಸ್ತೆಯಲ್ಲಿ ನಡೆದಿದೆ.

ನಗರದ ಐಡಿಎಸ್‍ಎಂಟಿ ಬಡಾವಣೆ ನಿವಾಸಿ ವೆಂಕಟೇಶ್(40) ಮೃತ ದುರ್ದೈವಿ. ಅತೀ ವೇಗವಾಗಿ ಮಂತ್ರಾಲಯ ಕಡೆಯಿಂದ ಭತ್ತದ ಲೋಡ್ ತುಂಬಿಸಿಕೊಂಡು ರಾಯಚೂರಿಗೆ ಲಾರಿಯೊಂದು ಬರುತಿತ್ತು. ನಗರದ ನಂದೀಶ್ವರ ದೇವಸ್ಥಾನದ ಕ್ರಾಸ್ ಬಳಿ ಟ್ರ್ಯಾಕ್ಟರ್‌ವೊಂದು ರಸ್ತೆ ಕ್ರಾಸ್ ಮಾಡುತಿತ್ತು. ಇದೇ ಸಮಯಕ್ಕೆ ಲಾರಿ ಕೂಡ ಕ್ರಾಸ್ ಬಳಿ ಬಂದಿದ್ದು, ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಲಾರಿ ಚಾಲಕ ಪ್ರಯತ್ನಿಸಿದ್ದಾನೆ. ಆದರೆ ಲಾರಿ ಅತೀ ವೇಗದಲ್ಲಿದ್ದ ಕಾರಣ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರನ ಮೇಲೆ ಲಾರಿ ಹರಿದಿದೆ. ಪರಿಣಾಮ ಸವಾರ ವೆಂಕಟೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಬೈಕ್ ಸವಾರನ ಮೇಲೆ ಲಾರಿ ಹರಿದ ಬಳಿಕ ಅದರ ಎಕ್ಸಲೇಟರ್ ರಾಡ್ ತುಂಡಾಗಿ ಲಾರಿ ಪಲ್ಟಿಹೊಡೆದಿದೆ. ಅಪಘಾತದಿಂದ ರಸ್ತೆ ಪಕ್ಕ ನಿಲ್ಲಿಸಿದ್ದ ಬೈಕ್‍ಗಳ ಮೇಲೆ ಲಾರಿ ಹಾಗೂ ಅದರಲ್ಲಿ ಲೋಡ್ ಆಗಿದ್ದ ಭತ್ತದ ಚೀಲಗಳು ಬಿದ್ದಿದೆ. ಈ ಅಪಘಾತದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಸ್ಥಳಕ್ಕೆ ಜಿಲ್ಲಾ ಪೋಲಿಸ್ ಅಧೀಕ್ಷಕ ಡಾ. ಸಿ.ಬಿ ವೇದಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಕೆಳಗೆ ಬೈಕ್‍ಗಳು ಸಿಲುಕಿದ್ದರಿಂದ ಸಾರ್ವಜನಿಕರು ಭತ್ತದ ಚೀಲಗಳನ್ನ ತೆರವು ಮಾಡಲು ಸಹಕರಿಸಿದರು. ಅಲ್ಲದೆ ಅಪಘಾತದ ಬಳಿಕ ಪರಾರಿಯಾಗಿದ್ದ ಲಾರಿ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದು, ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *