ಮಹಿಳಾ ಅರಣ್ಯಾಧಿಕಾರಿ ಮೇಲೆ ಟಿಆರ್‌ಎಸ್ ಕಾರ್ಯಕರ್ತರಿಂದ ಹಲ್ಲೆ

– ಒತ್ತುವರಿ ಜಮೀನಿನಲ್ಲಿ ಸಸಿ ನೆಡಲು ವಿರೋಧ

ವಿಜಯವಾಡ: ಒತ್ತುವರಿ ಜಮೀನಿನಲ್ಲಿ ಸಸಿ ನೆಡುತ್ತಿದ್ದ ಮಹಿಳಾ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಮೇಲೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಕರ್ತರು ಹಲ್ಲೆ ಮಾಡಿರುವ ಘಟನೆ ಕೊಮಪಂ ಭೀಮ್ ಅಸೀಫಾಬಾದ್ ಜಿಲ್ಲೆಯಲ್ಲಿ ನಡೆದಿದೆ.

ಕಾಗಜ್‍ನಗರ ಅರಣ್ಯ ಇಲಾಖೆಯ ಅಧಿಕಾರಿ ಅನಿತಾ ಚೋಲೆ ಗಾಯಗೊಂಡಿದ್ದಾರೆ. ಟಿಆರ್‌ಎಸ್ ಶಾಸಕ ಕೊನೆರು ಕೊನಪ್ಪ ಸಹೋದರ, ಕೊಮಪಂ ಭೀಮ್ ಅಸೀಫಾಬಾದ್ ಜಿಲ್ಲಾ ಪರಿಷತ್ ಉಪಾಧ್ಯಕ್ಷ ಕೃಷ್ಣ ಹಾಗೂ ಬೆಂಬಲಿಗರು ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಟಿಆರ್‍ಎಸ್ ಕಾರ್ಯಕರ್ತ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗಿದ್ದೇನು?:
ಕೊಮಪಂ ಭೀಮ್ ಅಸೀಫಾಬಾದ್ ಜಿಲ್ಲೆಯ ಸಿರ್‍ಪುರ್ ಕಾಗಜ್‍ನಗರ ಪ್ರದೇಶದಲ್ಲಿ ಭಾನುವಾರ ಅರಣ್ಯ ಇಲಾಖೆ ಅಧಿಕಾರಿ ಅನಿತಾ ಚೋಲೆ ಹಾಗೂ ಸಿಬ್ಬಂದಿ ಸಸಿ ನೆಡಲು ಸಿದ್ಧತೆ ನಡೆಸುತ್ತಿದ್ದರು. ಆದರೆ ಈ ಜಮೀನನ್ನು ಟಿಆರ್‍ಎಸ್ ಮುಖಂಡರು ಅತಿಕ್ರಮಣ ಮಾಡಿದ್ದಾರೆ ಎನ್ನುವ ಆರೋಪ ಕೂಡ ಇತ್ತು. ಹೀಗಾಗಿ ಅಲ್ಲಿ ಸಸಿಗಳನ್ನು ನೆಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಟ್ರ್ಯಾಕ್ಟರ್ ನಿಂದ ಭೂಮಿಯನ್ನು ಹದ ಮಾಡುತ್ತಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿ ಭೂಮಿಯನ್ನು ಹದ ಮಾಡುತ್ತಿದ್ದಾರೆ ಎನ್ನವುದು ತಿಳಿದ ಕೂಡಲೇ ಜಿಲ್ಲಾ ಪರಿಷತ್ ಉಪಾಧ್ಯಕ್ಷ ಕೃಷ್ಣ ಹಾಗೂ ಬೆಂಬಲಿಗರು ಅಲ್ಲಿಗೆ ಆಗಮಿಸಿ, ಅನಿತಾ ಚೋಲೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಟ್ರ್ಯಾಕ್ಟರ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗೆ ಹೊಡೆದಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಅನಿತಾ ಚೋಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕರ್ತವ್ಯನಿರತ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಜಿಲ್ಲಾ ಪರಿಷತ್ ಉಪಾಧ್ಯಕ್ಷ ಕೃಷ್ಣ ಸೇರಿದಂತೆ 16 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *