ಬೆಂಗಳೂರಿನಲ್ಲಿ ಮಳೆ – ಬಿಎಂಟಿಸಿ ಬಸ್ ಮೇಲೆ ಉರುಳಿದ ಬೃಹತ್ ಮರ

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಬಿಎಂಟಿಸಿ ಬಸ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಬಸ್ ಜಖಂಗೊಂಡಿದೆ. ಚಲಿಸುತ್ತಿದ್ದ ಬಸ್ ಮೇಲೆ ಬೃಹತ್ ಮರ ಉರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಹೊಸಕೆರೆಹಳ್ಳಿಯ ಪಿಇಎಸ್ ಕಾಲೇಜ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಮರ ಉದ್ದ ಇದ್ದ ಕಾರಣ ವಿದ್ಯುತ್ ಕಂಬಕ್ಕೆ ಹೊಡೆದು ನಂತರ ಬಸ್ ಮೇಲೆ ಬಿದ್ದಿದೆ. ವಿದ್ಯುತ್ ಕಂಬ ಮತ್ತು ವೈರ್ ಅಡ್ಡ ಇದ್ದ ಕಾರಣ ಬಸ್ ಮೇಲೆ ನಿಧಾನಕ್ಕೆ ಮರ ಬಿದ್ದಿದ್ದು, ಸದ್ಯ ಯಾರಿಗೂ ಏನು ಆಗಿಲ್ಲ. ಇದನ್ನೂ ಓದಿ: ಬೊಮ್ಮಾಯಿ ಎಲೆಕ್ಟೆಡ್ ಸಿಎಂ ಅಲ್ಲ, ಅಪಾಯಿಂಟೆಡ್ ಸಿಎಂ: ಸಿದ್ದರಾಮಯ್ಯ

ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಮರ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಹೊಸಕೆರೆಹಳ್ಳಿಯಿಂದ ನಾಯಂಡಹಳ್ಳಿ ಕಡೆಗೆ ಬಸ್ ಹೋಗುತ್ತಿತ್ತು. ಮಳೆ ಕಡಿಮೆ ಸುರಿದಿದ್ದು, ಗಾಳಿ ಜೋರಾಗಿ ಬೀಸಿದ ಕಾರಣ ಮರ ನೆಲಕ್ಕೆ ಬಿದ್ದಿದೆ. ಬಸ್ ಮುಂಭಾಗಕ್ಕೆ ಮರ ಬಿದ್ದಿದ್ದು, ಜಖಂಗೊAಡಿದೆ. ಬಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಡ್ರೈವರ್ ಕೂಡ ದೊಡ್ಡ ಅಪಾಯದಿಂದ ಪಾರಾಗಿದ್ದಾರೆ

ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ಸಾಲು ಸಾಲು ಮರಗಳು ಧರೆಗುರುಳಿವೆ. ಸತತವಾಗಿ ಸುರಿದ ಮಳೆಗೆ ನಗರದಲ್ಲಿ ಮರಗಳು ಮುರಿದು ಬಿದ್ದಿವೆ. ಇಂದು ಸುರಿದ ಮಳೆಗೆ ಕೋರಮಂಗಲ, ಶಾಂತಿನಗರ, ಹೊಸಕೆರೆಹಳ್ಳಿ, ಅಬ್ಬಿಗೆರೆ ಸೇರಿದಂತೆ 15 ಕಡೆ ಮರಗಳು ನೆಲ ಕಚ್ಚಿವೆ. ಎಲ್ಲಿಯೂ ಪ್ರಾಣಾಪಾಯ ಸಂಭವಿಸಿಲ್ಲ. ಎಲ್ಲಾ ಮರಗಳನ್ನು ತೆರವುಗೊಳಿಸಲಾಗಿದೆ. ಇದನ್ನೂ ಓದಿ: ಮಲ್ಪೆ ಕಡಲಲ್ಲಿ ಕರಿ ಸುಳಿಗಾಳಿ – ಆಗಸಕ್ಕೆ ಚಿಮ್ಮಿದ ಸಮುದ್ರದ ನೀರು

ಬಂಗಾಳಕೊಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ರಾಜ್ಯದಲ್ಲಿ ಇನ್ನೂ 5 ದಿನ ಮಳೆಯಾಗುವ ಸಾಧ್ಯತೆ ಇದೆ. ನಾಳೆಯೂ ನಗರದಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗಲಿದೆ. ಇಂದು ಸಂಜೆಯಿಂದಲೇ ಮೋಡ ಕವಿದ ವಾತಾವರಣವಿರಲಿದ್ದು, ಗಾಳಿ ವೇಗವಾಗಿ ಬೀಸುವ ಸಂಭವವಿದೆ. ನಾಳೆಯೂ ದಕ್ಷಿಣ ಒಳನಾಡಿನಲ್ಲಿ ಕೆಲವೆಡೆ ಭಾರೀ ಮಳೆಯಾಗಲಿದೆ. ಕರಾವಳಿಯಲ್ಲಿ ಇಂದಿನಿಂದ ಮೂರು ದಿನ ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲೂ ಇಂದಿನಂತೆ ಮುಂದಿನ ಐದು ದಿನಗಳ ಕಾಲ ಬಿರುಗಾಳಿ, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ವಿಜ್ಞಾನಿ ಪ್ರಸಾದ್ ಮಾಹಿತಿ ನೀಡಿದ್ದಾರೆ.

Comments

Leave a Reply

Your email address will not be published. Required fields are marked *