ಸಚಿವ ಅನಂತ್ ಕುಮಾರ್ ಹೆಗ್ಡೆಯನ್ನು ರೂಟ್ ನಂ.4ರ ಬಸ್ ಹತ್ತಿಸ್ಬೇಕು – ರೇವಣ್ಣ ಕಿಡಿ

ಬೆಂಗಳೂರು: ಸಾಹಿತಿಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಸಾರಿಗೆ ಸಚಿವ ಎಚ್ ಎಂ ರೇವಣ್ಣ ಕಿಡಿಕಾರಿದ್ದಾರೆ.

ವಿವಿಧ ಬೇಡಿಕೆ ಈಡೇರಿಸಿ ನಾಳೆ ರಾಜ್ಯ ರಸ್ತೆ ಸಾರಿಗೆ ನೌಕಕರರ ಸಂಘ (ಸಿಐಟಿಯು) ದಿಂದ ಪ್ರತಿಭಟನೆ ಹಿನ್ನಲೆಯಲ್ಲಿ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆಯವರು ಇತ್ತೀಚೆಗೆ ಮಾತಾಡೊದನ್ನ ನಿಲ್ಲಿಸಿದ್ರು ಈಗ ಮತ್ತೆ ಸಾಹಿತಿಗಳ ಬಗ್ಗೆ ಮಾತಾಡಿದ್ದಾರೆ. ಹೀಗಾಗಿ ಅವರನ್ನು ರೂಟ್ ನಂಬರ್ 4ರ ಬಸ್ ಹತ್ತಿಸಬೇಕು. ರೂಟ್ ನಂಬರ್ 4 ಅಂದ್ರೆ ಹುಚ್ಚಾಸ್ಪತ್ರೆಗೆ ಕಳುಹಿಸಬೇಕು ಅಂತ ಸಿಡಿಮಿಡಿಗೊಂಡಿದ್ದಾರೆ.

ಮಂಗಳೂರು-ಪುತ್ತೂರು ವಿಭಾಗಕ್ಕೆ ನೇಮಕಾತಿ:
ಪುತ್ತೂರು-ಮಂಗಳೂರು ವಿಭಾಗದಲ್ಲಿ ಚಾಲಕರು, ನಿರ್ವಾಹಕರ ಕೊರತೆ ಇದೆ. ಆ ಭಾಗದಲ್ಲಿ ಕೆಲಸ ಮಾಡುತ್ತಿರುವವರು ವರ್ಗಾವಣೆ ಕೇಳಿದ್ದಾರೆ. ಆದರೆ ಅಲ್ಲಿ ಕೆಲಸ ಮಾಡಲು ಸಿಬ್ಬಂದಿ ಇಲ್ಲ. ಅಲ್ಲಿನವರು ಪ್ರಪಂಚದಾದ್ಯಂತ ಕೆಲಸ ಮಾಡ್ತಾರೆ. ಆದ್ರೆ ಚಾಲಕ, ನಿರ್ವಾಹಕ ವೃತ್ತಿಗೆ ಬರುವವರು ಕಡಿಮೆ. ಹೀಗಾಗಿ ಸಮಸ್ಯೆ ಸೃಷ್ಟಿಯಾಗಿದೆ. ಈ ಎಲ್ಲಾ ಕಾರಣದಿಂದ ಮಂಗಳೂರು-ಪುತ್ತೂರು ವಿಭಾಗಕ್ಕೆ ತಕ್ಷಣವೇ ನೇಮಕಾತಿಗೆ ಚಾಲನೆ ಕೊಟ್ಟಿದ್ದೇವೆ. ಇನ್ನು ರಾಜ್ಯ ರಸ್ತೆ ಸಾರಿಗೆ ನಿಗಮದ 4 ನಿಗಮಗಳು ಲಾಸ್ ನಲ್ಲಿ ನಡೀತಿದೆ. ಈಶಾನ್ಯ ಸಾರಿಗೆ ಹೆಚ್ಚು ಲಾಸ್ ನಲ್ಲಿ ನಡೀತಿದೆ ಅಂತ ತಿಳಿಸಿದ್ರು.

ಪ್ರತಿಭಟನೆ ವಾಪಸ್:
ಪ್ರತಿಭಟನೆ ಕುರಿತು ಮಾತನಾಡಿದ ಅವರು, ಈಗಾಗಲೇ ಸಂಘಟನೆಯವರ ಜೊತೆ ಮಾತುಕತೆ ನಡೆಸಲಾಗಿದೆ. 1.30 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನ ಹೊಂದಿರುವ ಇಲಾಖೆ ಇದು. ಈಗಾಗಲೇ ಸಂಘಟನೆಯ ಬಹುತೇಕ ಬೇಡಿಕೆ ಈಡೇರಿಸಲಾಗಿದೆ. 6 ಬೇಡಿಕೆಗಳ ಬಗ್ಗೆ ಸಂಘಟನೆಯವರು ಇಲಾಖೆ ಮುಂದೆ ಇಟ್ಟಿದ್ರು. ಇದ್ರಲ್ಲಿ ಬಹುತೇಕ ಬೇಡಿಕೆ ಈಡೇರಿಸಿದ್ದೇವೆ. ಕೆಲವು ಬೇಡಿಕೆ ಈಡೇರಿಕೆಗೆ ಸಮಯ ಕೇಳಿದ್ದೇವೆ. ಈಗಾಗಲೇ ಸರ್ಕಾರ 4 ರಸ್ತೆ ಸಾರಿಗೆ ನಿಗಮದ ನೌಕರರಿಗೆ 12.5% ವೇತನ ಹೆಚ್ಚಳ ಮಾಡಲಾಗಿದೆ. ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ಹೀಗಾಗಿ ಸಂಘಟನೆಯವರು ಪ್ರತಿಭಟನೆ ಮಾಡೋದು ಬೇಡ ಅಂತ ಮನವಿ ಮಾಡಿದ್ದೇವೆ. ಹೀಗಾಗಿ ಪ್ರತಿಭಟನೆಯನ್ನ ಸಂಘಟನೆಯವರು ವಾಪಸ್ ಪಡೆದಿದ್ದಾರೆ ಎಂದು ಅವರು ಹೇಳಿದ್ರು.

ಚುನಾವಣೆಯಲ್ಲಿ ಸ್ಫರ್ಧೆ:
ಇದೇ ವೇಳೆ ಮಹಾಲಕ್ಷ್ಮಿ ಲೇಔಟ್ ನಿಂದ ಚುನಾವಣೆಗೆ ಸ್ಪರ್ಧೆ ವಿಚಾರದ ಕುರಿತು ಮಾತನಾಡಿ, ನನ್ನ ಮನೆ ಮಹಾಲಕ್ಷ್ಮಿ ಲೇಔಟ್ ನಲ್ಲಿ ಇದೆ. ದಿನ ಹೋಗಿ ಬರ್ತಿನಿ. ಹೆಬ್ಬಾಳ, ಮಾಗಡಿ ಕ್ಷೇತ್ರ ಈಗಾಗಲೇ ಬಿಟ್ಟಿದ್ದೇನೆ. ಹೈಕಮಾಂಡ್ ನಿರ್ಧಾರ ಮಾಡಿದ್ರೆ ಸ್ಪರ್ಧೆ ಮಾಡ್ತೀನಿ. ನನಗೆ ಇನ್ನು ಎರಡೂವರೆ ವರ್ಷ ಎಂಎಲ್‍ಸಿ ಅವಧಿ ಇದೆ. ನಾನೇನು ತಲೆಕೆಡಿಸಿಕೊಂಡಿಲ್ಲ. ಹೈಕಮಾಂಡ್ ಹೇಳಿದ್ರೆ ಎಲ್ಲಿಂದ ಬೇಕಾದ್ರು ಸ್ಪರ್ಧೆ ಮಾಡ್ತೀನಿ ಅಂತ ಸ್ಪಷ್ಟಪಡಿಸಿದ್ರು.

ಅನಂತ್ ಕುಮಾರ್ ಹೆಗ್ಡೆ ಏನ್ ಹೇಳಿದ್ದರು?:
ಸೋ ಕಾಲ್ಡ್ ಬುದ್ಧಿ ಜೀವಿಗಳು ಬರಿದಿದ್ದೆಲ್ಲಾ ಸಾಹಿತ್ಯ, ಗೀಚಿದ್ದೆಲ್ಲಾ ಕಾವ್ಯ, ಅರ್ಥವೂ ಇರೋದಿಲ್ಲಾ, ತಲೆ, ಬುಡವೂ ಇರೋದಿಲ್ಲ. ಅವರಿಗೆ ಯಾವುದು ಇಂದು ಸರ್ಕಾರಿ ಸೈಟ್ ಬೇಕಾಗಿರುತ್ತೆ, ಅದಕ್ಕೆ ವಿಚಾರವಾದಿಗಳ ಪಟ್ಟ ಕಟ್ಟಿಕೊಂಡಿರುತ್ತಾರೆ. ನಾವು ಮಾನವರಾಗಬೇಕು ಎಂದು ಸ್ಪಷ್ಟನೆ ಇಲ್ಲದವರು ಏನಾಗಬೇಕು ಎಂದು ಕೇಳಿದಾಗ ಮಾನವರಾಗಬೇಕು ಅಂತಾರೆ. ಹಾಗಾದ್ರೆ ನಾವು ದನಾನಾ ಎಂದು ಪ್ರಶ್ನಿಸಿದ ಅವರು, ನಾವು ಪ್ರಾಣಿಗಳ ತರಾ ಇದ್ದಿವಾ? ನಾವು ಹುಟ್ಟಿದ್ದೆ ಮಾನವರಾಗಿ. ಇನ್ನು ಆಗಬೇಕಾಗಿರುವುದು ದೇವರಾಗಿ. ಮನುಷ್ಯ ದೇವರಾಗಲು ಪ್ರಯತ್ನ ಮಾಡಬೇಕು. ಆದ್ರೆ ಕಲಿತಿರುವ ಸೋ ಕಾಲ್ಡ್ ಬುದ್ಧಿ ಜೀವಿಗಳು ಹೇಳ್ತಾರೆ ನಾವು ಮಾನವರಾಗಬೇಕು. ಅವರ ದೃಷ್ಟಿಯಲ್ಲಿ ನಾವು ಹೆಂಗೆ ಕಂಡಿದ್ದೇವೆ ಗೊತ್ತಿಲ್ಲ. ಅವರಿಗೆ ದೃಷ್ಟಿ ದೋಷ ಆಗಿರಬೇಕು ಅಂತ ಹೇಳಿದ್ದರು.

https://www.youtube.com/watch?v=4JKXmwu0JR0

Comments

Leave a Reply

Your email address will not be published. Required fields are marked *