KSRTC ಬಸ್ ಗೆ ಕಾರ್ ಡಿಕ್ಕಿ – ಯುವ ವಕೀಲೆ ದುರ್ಮರಣ

ಮಂಗಳೂರು: ಕೆಎಸ್‍ಆರ್ ಟಿಸಿ ಬಸ್ ಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಯುವ ವಕೀಲೆಯೊಬ್ಬರು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಗಾಯತ್ರಿ(23) ಎಂದು ಗುರುತಿಸಲಾಗಿದೆ. ಬಂಟ್ವಾಳದ ಕುಳಗ್ರಾಮದ ನಿವಾಸಿಯಾಗಿರೋ ಇವರು ಮಂಗಳೂರಿನಲ್ಲಿ ವಕೀಲರೊಬ್ಬರ ಬಳಿ ತರಬೇತಿ ಪಡೆಯುತ್ತಿದ್ದರು. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶನಿವಾರ ಮಧ್ಯಾಹ್ನ ಕೆಎಸ್ಆರ್  ಟಿಸಿ ಬಸ್ ಸುಳ್ಯಪದವುನಿಂದ ಪುತ್ತೂರು ಕಡೆಗೆ ಚಲಿಸುತ್ತಿತ್ತು. ಈ ಸಂದರ್ಭದಲ್ಲಿ ಆರ್ಯಾಪು ಗ್ರಾಮದ ಸಂಪ್ಯ ಮಸೀದಿ ಬಳಿ ಎದುರುಗಡೆಯಿಂದ ಅತಿ ವೇಗದಿಂದ ಬರುತ್ತಿದ್ದ ಬಿಳಿ ಬಣ್ಣದ ವ್ಯಾಗನಾರ್ ಕಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರ್ ಚಾಲಕ ಯೋಗಿಶ್ ಹಾಗೂ ಗಾಯತ್ರಿಗೆ ಗಂಭೀರ ಗಾಯಗಳಾಗಿದ್ದು, ಕೂಡಲೇ ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಗಾಯತ್ರಿ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರಿನ  ಮುಂದಿನ ಭಾಗ ನಜ್ಜುಗುಜ್ಜಾಗಿದೆ.

ಕಾರ್ ಚಾಲಕನ ಅತಿ ವೇಗ ಹಾಗೂ ಅಜಾಗರೂಕತೆಯಿಂದಾಗಿ ಈ ಅಪಘಾತ ಸಂಭವಿಸಿದೆ ಅಂತ ಹೇಳಲಾಗುತ್ತಿದೆ. ಈ ಘಟನೆ ಸಂಬಂಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *