ಕಾರವಾರ: ಇಯರ್ ಫೋನ್ ಹಾಕಿಕೊಂಡು ಮೊಬೈಲ್ ನಲ್ಲಿ ಮಾತನಾಡುತ್ತಾ ರೈಲು ಹಳಿಯ ಮೇಲೆ ಹೋಗುತ್ತಿದ್ದ ಪರಿಣಾಮ ರೈಲು ಡಿಕ್ಕಿ ಹೊಡೆದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ನಡೆದಿದೆ.
ಬಾವಿಕೇರಿ ನಿವಾಸಿ ಗಣೇಶ್ ನಾಯ್ಕ (24) ಮೃತಪಟ್ಟ ಯುವಕ. ತಾಲೂಕಿನ ಅಮದಳ್ಳಿಯ ರೈಲು ಹಳಿಯಲ್ಲಿ ಈ ಘಟನೆ ನಡೆದಿದೆ. ಗಣೇಶ್ ಕಿವಿಗೆ ಇಯರ್ ಫೋನ್ ಹಾಕಿಕೊಂಡು ರೈಲ್ವೆ ಹಳಿಯ ಮೇಲೆ ಮಾತನಾಡುತ್ತಾ ಹೋಗುತ್ತಿದ್ದನು. ಇದೇ ವೇಳೆ ಆ ಮಾರ್ಗದಲ್ಲಿ ಮಡಗಾವ್ – ಮಂಗಳೂರು ಇಂಟರ್ ಸಿಟಿ ರೈಲು ಬರುತ್ತಿತ್ತು.
ಗಣೇಶ್ ಕಿವಿಗೆ ಇಯರ್ ಫೋನ್ ಹಾಕಿದ್ದ ಪರಿಣಾಮ ರೈಲು ಬರುವ ಶಬ್ದ ಕೇಳಿಸಲಿಲ್ಲ. ಕೊನೆಗೆ ರೈಲು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಗಣೇಶ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಕೊನೆಗೆ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿಸಿದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದ ನಂತರ ಆತನ ಮೃತ ದೇಹದಲ್ಲಿ ಇಯರ್ ಫೋನ್ ಹಾಗೆಯೇ ಕಿವಿಯಲ್ಲಿ ಇರುವುದು ಕಂಡು ಬಂದಿದೆ.
ಈ ಘಟನೆ ಸಂಬಂಧ ಕಾರವಾರ ಪೊಲೀಸ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

Leave a Reply