ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತ ಟ್ರಾಫಿಕ್ ಪೊಲೀಸರು

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಗಾರು ಮಳೆ ಪ್ರಾರಂಭಕ್ಕೆ ಇನ್ನೊಂದು ತಿಂಗಳು ಬಾಕಿ ಇದೆ. ಸುಮಾರಾಗಿ ಮಳೆ ಬಿದ್ರೂ ಸಾಕು, ಬೆಂಗಳೂರು ತತ್ತರಿಸಿ ಹೋಗುತ್ತದೆ. ಮಳೆಯಿಂದ ಉಂಟಾಗುವ ಅವಘಡಗಳನ್ನು ತಡೆಯೋಕೆ ಬೆಂಗಳೂರು ಟ್ರಾಫಿಕ್ ಪೊಲೀಸರು ಮುಂದಾಗಿದ್ದಾರೆ.

ಬೆಂಗಳೂರು ಯಾವುದಕ್ಕಾದರೂ ಭಯಪಡುತ್ತೆ ಅಂದ್ರೆ, ಅದು ಎರಡೇ ವಿಚಾರಕ್ಕೆ ಒಂದು ಮಳೆ, ಮತ್ತೊಂದು ಟ್ರಾಫಿಕ್. ಸಣ್ಣದೊಂದು ಮಳೆ ಬಂದರೆ ಸಾಕು ಮರಗಳು ರಸ್ತೆಗೆ ಉರುಳಿ ಬಿಡುತ್ತವೆ. ರಸ್ತೆ ತುಂಬೆಲ್ಲ ನೀರು ನಿಂತು, ಕಿಲೋಮಿಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗುತ್ತದೆ. ಮಳೆಯ ಸಂದರ್ಭದಲ್ಲಿ ಪಾತ್ ಹೋಲ್ ಗೆ ಬೈಕ್ ಇಳಿದು ಕೈಕಾಲು ಮುರಿದುಕೊಳ್ಳೋದರಿಂದ ಹಿಡಿದು, ವಾಹನ ಸವಾರರು ಜೀವ ಕಳೆದುಕೊಳ್ಳುತ್ತಾರೆ. ಮಳೆಗಾಲದಲ್ಲಿ ಅವೈಜ್ಞಾನಿಕ ವಿದ್ಯುತ್ ಕಂಬಗಳು, ಟ್ರಾನ್ಸ್ ಫಾರ್ಮರ್ ಗಳಿಂದ ಮಕ್ಕಳು, ಸಾರ್ವಜನಿಕರು ಕರೆಂಟ್ ಶಾಕ್ ಹೊಡೆದು ಪ್ರಾಣ ಕಳೆದುಕೊಂಡಿರೋ ಉದಾಹರಣೆಗಳು ಸಾಕಷ್ಟಿವೆ.

ಇಷ್ಟೆಲ್ಲಾ ಅವಘಡಗಳನ್ನು ತಡೆಯೋ ನಿಟ್ಟಿನಲ್ಲಿ ಬೆಂಗಳೂರು ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್, ತಮ್ಮ ಸಿಬ್ಬಂದಿ ಮೂಲಕ ನಗರದಲ್ಲಿ ಎಲ್ಲೆಲ್ಲಿ ಏನೇನ್ ಸಮಸ್ಯೆ ಆಗುತ್ತೆ, ಹೇಗೆ ಟ್ರಾಫಿಕ್ ಜಾಮ್ ಆಗುತ್ತೆ, ಆ ಸಮಸ್ಯೆಗಳಿಗೆ ಏನೆಲ್ಲಾ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು ಅಂತಾ ಒಂದು ರಿಪೋರ್ಟ್ ರೆಡಿ ಮಾಡಿದ್ದಾರೆ.

ರಿಪೋರ್ಟ್ ಕಾರ್ಡ್:
* ನಗರದ 45 ಏರಿಯಾಗಳ 130 ಕಡೆಗಳ ರಸ್ತೆಗಳಲ್ಲಿ ಮಳೆ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗುತ್ತೆ.
* 221 ಪಾದಚಾರಿ ಮಾರ್ಗಗಳ ಬಳಿ 86 ಸ್ಕೈವಾಕ್ ಹಾಗೂ ಮೇಲುಸೇತುವೆಗಳು ನಿರ್ಮಿಸಬೇಕಿದೆ.
* 34 ಸುರಂರ್ಗ ಮಾರ್ಗ, 213 ಕಡೆಗಳಲ್ಲಿ ಪಾದಚಾರಿ ಮಾರ್ಗಗಳ ದುರಸ್ತಿಗೆ ಕ್ರಮ
* 478 ಭಾಗಗಳಲ್ಲಿ ಜಂಕ್ಷನ್ ಗಳನ್ನು ಅಭಿವೃದ್ಧಿಗೊಳಿಸುವುದು, 292 ಜಾಗಗಳಲ್ಲಿ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವುದು.
* 97 ವಿದ್ಯುತ್ ಕಂಬ ಹಾಗೂ 76 ಟ್ರಾನ್ಸ್ ಫಾರ್ಮರ್ ಸ್ಥಳಾಂತರ. ಹೊಸದಾಗಿ 105 ವಿದ್ಯುತ್ ಕಂಬ ಅಳವಡಿಕೆ.
* 47 ಅಪಾಯಕಾರಿ ಅಕ್ಸಿಡೆಂಟ್ ಜೋನ್ಸ್‍ಗಳಲ್ಲಿ ಅಪಘಾತಗಳ ತಡೆಗೆ ಕ್ರಮ.
* ಹೊಸದಾಗಿ 227 ಜಾಗಗಳಲ್ಲಿ ರಸ್ತೆ ಉಬ್ಬುಗಳ ನಿರ್ಮಾಣ, ಅವೈಜ್ಞಾನಿಕವಾಗಿರುವ 131 ಹಂಪ್ಸ್ ಗಳ ತೆರವು.
* ನಗರದ 52 ಕಡೆಗಳಲ್ಲಿ ರಸ್ತೆಗೆ ಹೊಂದಿಕೊಂಡಂತೆ ಕಸದ ರಾಶಿ ಹಾಕುತ್ತಿದ್ದು, ಅವುಗಳ ತೆರವಿಗೆ ಕ್ರಮ.

ಈ ಎಲ್ಲಾ ಮೇಲಿನ ಅಂಶಗಳನ್ನು ಪಟ್ಟಿ ಮಾಡಿದ ಸಂಚಾರಿ ಹೆಚ್ಚುವರಿ ಆಯುಕ್ತ ಹರಿಶೇಖರನ್ ಬಿಬಿಎಂಪಿ ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗೆ ಪತ್ರ ಬರೆದು, ಮಳೆಗಾಲ ಪ್ರಾರಂಭಕ್ಕೂ ಮುನ್ನವೇ ಮುಂಜಾಗ್ರತೆ ವಹಿಸುವಂತೆ ಮನವಿ ಮಾಡಿದ್ದಾರೆ. ಟ್ರಾಫಿಕ್ ಪೊಲೀಸರ ಈ ಕಳಕಳಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *