ಪರಿಶೀಲನೆಯ ನೆಪದಲ್ಲಿ ವ್ಯಾಪಾರಸ್ಥರಿಂದ 8 ಸಾವಿರ ರೂ. ಲಪಟಾಯಿಸಿದ್ರಾ ಚುನಾವಣಾಧಿಕಾರಿ?

ದಾವಣಗೆರೆ: ವ್ಯಾಪಾರಿಗಳಿಂದ ಹಣವನ್ನು ಚುನಾವಣಾ ಅಧಿಕಾರಿಗಳು ಲಪಟಾಯಿಸಿದ್ದಾರೆ ಎಂದು ಆರೋಪವೊಂದು ಜಿಲ್ಲೆಯಲ್ಲಿ ಕೇಳಿಬಂದಿದೆ.

ಶಾಬೂ ಹಾಗೂ ತಾಜ್ ಎಂಬಿಬ್ಬರು ವ್ಯಾಪಾರಿಗಳು ಹಾವೇರಿ ಜಿಲ್ಲೆಯ ಮಾರುಕಟ್ಟೆಗೆ ಮೆಕ್ಕೆಜೋಳ ವ್ಯಾಪಾರ ಮಾಡಿ ದಾವಣಗೆರೆಗೆ ವಾಪಸ್ ಆಗುತ್ತಿರುವಾಗ ಕುಂದವಾಡದ ಬಳಿ ಇರುವ ಚೆಕ್ ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿ ಶಿವಕುಮಾರ್ ಎಂಬವರು ಮೆಕ್ಕೆಜೋಳ ವ್ಯಾಪಾರ ಮಾಡಿ ಬಂದಿದ್ದ 48 ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡಿದ್ದಾರೆ.

ವ್ಯಾಪಾರಸ್ಥರ ಬಳಿ ದಾಖಲೆಗಳು ಸರಿ ಇದ್ದ ಕಾರಣ ಹಣ ವಾಪಸ್ ಕೊಡುವಾಗ ಕೇವಲ 40 ಸಾವಿರ ಮಾತ್ರ ಕೊಟ್ಟು, ಉಳಿದ 8 ಸಾವಿರವನ್ನು ಅಧಿಕಾರಿ ಶಿವಕುಮಾರ್ ಲಪಟಾಯಿಸಿದ್ದಾರೆ ಎಂದು ವ್ಯಾಪಾರಸ್ಥರು ಅರೋಪ ಮಾಡುತ್ತಿದ್ದಾರೆ.

ಚುನಾವಣಾ ಅಧಿಕಾರಿಗಳು ಮಾತ್ರ ನಾವು ಹಣ ಲಪಟಾಯಿಸಿಲ್ಲ ಸುಮ್ಮನೆ ನಮ್ಮ ಮೇಲೆ ವ್ಯಾಪಾರಸ್ಥರು ಅರೋಪ ಮಾಡುತ್ತಿದ್ದಾರೆ. ನಾವು ಪರಿಶೀಲನೆ ಮಾಡಿ ಹಾಗೇ ವಾಪಸ್ ಕಳಿಸಿದ್ದೇವೆ. ಬೇಕಾದರೆ ಸಿಸಿ ಕ್ಯಾಮೆರಾಗಳು ಇವೆ ಪರಿಶೀಲನೆ ನಡೆಸಲಿ ಎಂದು ಚುನಾವಣಾ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ವ್ಯಾಪಾರಸ್ಥರು ಮಾತ್ರ ತಮ್ಮ ಹಣವನ್ನು ಚುನಾವಣಾ ಅಧಿಕಾರಿಗಳೇ ಲಪಟಾಯಿಸಿದ್ದಾರೆ ಎಂದು ಅರೋಪ ಮಾಡುತ್ತಿದ್ದಾರೆ.

ಇನ್ನು ಘಟನೆ ನಡೆದ ಸ್ಥಳಕ್ಕೆ ಚುನಾವಣಾ ಹಿರಿಯ ಅಧಿಕಾರಿಗಳು ಹಾಗೂ ವಿದ್ಯಾನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಸಿಸಿ ಕ್ಯಾಮೆರಾ ಪರಿಶೀಲನೆ ನಡೆಸಿ ತನಿಖೆ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *