ಟ್ರ್ಯಾಕ್ಟರ್ ಇಂಜಿನ್ ಮಗುಚಿ ಬಿದ್ದು ಸಿಎಂ ಆಪ್ತ ದುರ್ಮರಣ

ಹಾಸನ: ಟ್ರ್ಯಾಕ್ಟರ್ (Tractor) ಇಂಜಿನ್ ಮಗುಚಿ ಬಿದ್ದು ಸಿಎಂ ಸಿದ್ದರಾಮಯ್ಯ (Siddaramaiah) ಅವರ ಆಪ್ತರೊಬ್ಬರು ಸಾವನ್ನಪ್ಪಿದ ಘಟನೆ ಅರಸೀಕೆರೆ ತಾಲೂಕಿನ ಗಂಡಸಿ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಗ್ರಾಮದ ಜಗದೀಶ್ (52) ಎಂದು ಗುರುತಿಸಲಾಗಿದೆ. ಅವರು ಪತ್ನಿ ಜೊತೆ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಟ್ರ್ಯಾಕ್ಟರ್‌ನಲ್ಲಿ ಮಣ್ಣು ಸಾಗಿಸುವಾಗ ಇಂಜಿನ್ ಪಲ್ಟಿಯಾದ್ದು, ಕೆಳಗೆ ಸಿಲುಕಿ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಕ್ತಕ್ಕೆ ರಕ್ತವೇ ಉತ್ತರ, ಸುಹಾಸ್‌ ಹತ್ಯೆ ಬಳಿಕ ಪ್ರತೀಕಾರದ ಪೋಸ್ಟ್‌ – 12 ಎಫ್‌ಐಆರ್‌ ದಾಖಲು

ಅವರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಪೇದೆಯಾಗಿದ್ದರು. ಚುನಾವಣೆಗೆ ಸ್ಪರ್ಧಿಸಲು ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದರು.

ಜಗದೀಶ್‌ ಅವರು ಪೇದೆಯಾಗಿದ್ದಾಗ ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡರ ಅಂಗರಕ್ಷಕರಾಗಿದ್ದರು. ಅರಸೀಕೆರೆಯ ಗನ್‌ಮ್ಯಾನ್ ಎಂದು ಹೆಸರುವಾಸಿಯಾಗಿದ್ದ ಅವರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘದ ಅಧ್ಯಕ್ಷ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿಸಚಿವ ಹೆಚ್.ಎಂ.ರೇವಣ್ಣ ಆಪ್ತರಾಗಿದ್ದರು‌. ಜಗದೀಶ್ ಅವರ ಪತ್ನಿ ಮಾನಸ ಅರಸೀಕೆರೆ ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾಗಿದ್ದಾರೆ.

ಸ್ಥಳಕ್ಕೆ ಗಂಡಸಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕ್ ಯುವತಿಯನ್ನು ಮದ್ವೆಯಾಗಿ ಕೆಲಸ ಕಳೆದುಕೊಂಡ ಸಿಆರ್‌ಪಿಎಫ್‌ ಯೋಧ!