ಟೋಲ್ ಅಳವಡಿಕೆಗೆ ವಿರೋಧ- ಡಿ.30 ರಂದು ಕುಂದಗೋಳ ಬಂದ್

ಹುಬ್ಬಳ್ಳಿ: ಲಕ್ಷ್ಮೇಶ್ವರ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯ ಶೆರೆವಾಡ ಬಳಿ ಟೋಲ್ ನಿರ್ಮಿಸಲು ಮುಂದಾಗಿರುವ ಸರ್ಕಾರದ ಕ್ರಮ ಖಂಡಿಸಿ ಡಿ.30ಕ್ಕೆ ಕುಂದಗೋಳ ಪಟ್ಟಣ ಬಂದ್‍ಗೆ ಕರೆ ನೀಡಲಾಗಿದೆ.

ಟೋಲ್ ನಿರ್ಮಾಣ ವಿರೋಧಿಸಿ ವಿವಿಧ ಸಂಘಟನೆಗಳು, ರೈತ ಸಂಘ ಹಾಗೂ ತಾಲೂಕು ಹಿತರಕ್ಷಣಾ ಸಮಿತಿ ವತಿಯಿಂದ ಕುಂದಗೋಳ ಪಟ್ಟಣ ಬಂದ್ ಮಾಡಲಾಗುವುದೆಂದು ಕಾಂಗ್ರೆಸ್ ಮುಖಂಡ ಶಿವಾನಂದ ಬೆಂತೂರ ತಿಳಿಸಿದ್ದಾರೆ.

ಕುಂದಗೋಳ ಹಿಂದುಳಿದ ತಾಲೂಕಾಗಿದ್ದು, ಇಲ್ಲಿನ ಜನರು ಕೃಷಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ಜನ ಹುಬ್ಬಳ್ಳಿ ಲಕ್ಷ್ಮೇಶ್ವರಕ್ಕೆ ಕೆಲಸ ಅರಸಿಕೊಂಡು ಹೋಗುತ್ತಿದ್ದು, ಟೋಲ್ ನಿರ್ಮಾಣದಿಂದ ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿ ಬಂದ್‍ಗೆ ಕರೆ ನೀಡಲಾಗಿದೆ ಎಂದು ಶಿವಾನಂದ ತಿಳಿಸಿದ್ದಾರೆ.

ಟೋಲ್ ನಿರ್ಮಾಣ ಹಗಲು ದರೋಡೆಯಾಗಿದ್ದು, ಕೂಡಲೇ ಸ್ಥಗಿತಗೊಳಿಸದಿದ್ದರೆ ಟೋಲ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 30ರಂದು ನಡೆಯುವ ಕುಂದಗೋಳ ಪಟ್ಟಣ ಬಂದ್ ಗೆ ತಾಲೂಕಿನ ಜನರ ಬೆಂಬಲವಿದ್ದು, ಯಾವುದೇ ಕಾರಣಕ್ಕೂ ಟೋಲ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *