ಇವತ್ತಿನ ರಾಜಕೀಯ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕ: ದೇವೇಗೌಡ

ಬೆಂಗಳೂರು: ಇವತ್ತಿನ ರಾಜಕೀಯ ಪರಿಸ್ಥಿತಿ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

ಭಾರತ ಸಂಸತ್ತು ಪುಸ್ತಕ ಬಿಡುಗಡೆ ಕಾಯಕ್ರಮದಲ್ಲಿ ಮಾತನಾಡಿದ ಅವರು, ನನಗೆ ಯಾವುದೇ ರಾಜಕೀಯ ಹುಚ್ಚು ಇಲ್ಲ. 15 ಚುನಾವಣೆ ಎದುರಿಸಿದ್ದೇನೆ. ರಾಜಕೀಯದ ಹುಚ್ಚು ಸಾಕಾಗಿದೆ. ಆದರೆ ಒಬ್ಬ ಪ್ರಜೆಯಾಗಿ ದೇಶದ ರಾಜಕಾರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಜಾತಿ, ಪ್ರಾದೇಶಿಕತೆ ಹಾಗೂ ಪ್ರಾದೇಶಿಕ ಉಪಟಳದಿಂದಾಗಿ ಒಂದು ರಾಜಕೀಯ ಪಕ್ಷ ಬೆಳೆಯುತ್ತಿದೆ. ಇದರಿಂದ ದೇಶಕ್ಕೆ ಅಪಾಯವಿದೆ ಎಂದರು.

ನಾನು ಮೂಲ ಕಾಂಗ್ರೆಸಿಗ. ಇಂದಿರಾಗಾಂಧಿಯವರಿಂದ ವಿರೋಧಿ ಬಣ ಹೊರ ಬಂದಾಗ ನಾನು ಬಂಡಾಯ ಕಾಂಗ್ರೆಸ್‍ಗೆ ಹೋಗಬೇಕಾಯ್ತು. ಬಳಿಕ ಬಂಡಾಯ ಕಾಂಗ್ರೆಸ್ ನಲ್ಲಿ ಶಾಸಕನಾದೆ ಎಂದು ಹಳೆಯ ನೆನಪನ್ನು ಮೆಲುಕು ಹಾಕಿದರು.

ಸ್ವಾತಂತ್ರ್ಯ ತಂದುಕೊಟ್ಟ ಪಕ್ಷ ದಿನೇ ದಿನೇ ಪ್ರಾಬಲ್ಯ ಕಳೆದುಕೊಳ್ಳುತ್ತಿದೆ. ದಕ್ಷಿಣ ಭಾರತದಲ್ಲಿ ರಾಜಕೀಯ ಶಕ್ತಿ ಹೆಚ್ಚಿಲ್ಲ. ಉತ್ತರ ಭಾರತದಲ್ಲಿ ರಾಜಕೀಯ ಶಕ್ತಿ ಪ್ರಬಲವಾಗಿದೆ. ಪ್ರಜಾಪ್ರಭುತ್ವಕ್ಕೆ ಭದ್ರ ಅಡಿಪಾಯ ಹಾಕಿದ್ದು ನೆಹರು ಎಂದರು.

ರಾಷ್ಟ್ರದ ವ್ಯವಸ್ಥೆ ಇವತ್ತು ಕೆಟ್ಟಿದೆ. ವಿಪ್ ನೀಡುತ್ತಾರೆ ಎಂದು ಎಷ್ಟೇ ಅಕ್ರಮ ಮಾಡಿದರೂ ನಾವು ಸುಮ್ಮನೆ ಇರಬೇಕು. ಇದು ಇವತ್ತಿನ ಪ್ರಸ್ತುತ ರಾಜಕೀಯದ ಸನ್ನಿವೇಶವಾಗಿದೆ. ರಾಜಕೀಯದಲ್ಲಿ 60 ವರ್ಷ ಕಳೆದಿದ್ದೇನೆ. ಒಂದು ಬಾರಿ ನಾನು ಸೋತೆ. ಅ ಸೋಲು ನಾನು ಸಂಸತ್ ಗೆ ಹೋಗಲು ದಾರಿ ಆಯಿತು. ಇಲ್ಲದೆ ಇದ್ದಿದ್ರೆ ನಾನು ರಾಜ್ಯದಲ್ಲಿ ಇರುತ್ತಿದ್ದೆ ಎಂದು ದೇವೇಗೌಡರು ಹೇಳಿದರು.

Comments

Leave a Reply

Your email address will not be published. Required fields are marked *