ಇಂದು ಸಿಎಲ್‍ಪಿ ಸಭೆ – ಹಾಜರಾಗ್ತಾರಾ ಅತೃಪ್ತ ಶಾಸಕರು?

ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ಸಿಎಲ್‍ಪಿ) ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆಯಲಿದೆ.

ಬೆಳಗ್ಗೆ 9.30ಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಗೆ ಅತೃಪ್ತರು ಹಾಜರಾಗ್ತಾರಾ ಅಥವಾ ಇಲ್ವಾ ಅನ್ನೋದೇ ಕುತೂಹಲಕಾರಿಯಾಗಿದೆ. ಬಂಡಾಯದ ಬಾವುಟ ಹಾರಿಸಿ ಹೊರಟಿರುವ ಶಾಸಕರ ವಿರುದ್ಧ ಈಗಾಗಲೇ ಸ್ಪೀಕರ್‌ಗೆ ದೂರು ನೀಡಲಾಗಿದೆ.

ಇಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಕಾಂಗ್ರೆಸ್ ರಣತಂತ್ರ ರೂಪಿಸಿದೆ. ಇಂದಿನ ಸಭೆಗೋಸ್ಕರ ಕಳೆದ ರಾತ್ರಿಯೇ ಕಾಂಗ್ರೆಸ್ ಪಾಳಯ ತಮ್ಮ ಅತೃಪ್ತ ಶಾಸಕರನ್ನ ಬೆದರಿಸುವ ತಂತ್ರಕ್ಕೆ ಮೊರೆಹೋಗಿತ್ತು. ಇಂದಿನ ಸಿಎಲ್‍ಪಿಗೆ ಸಂಭವನೀಯ ಬಂಡಾಯಗಾರರು ಗೈರಾಗಬಾರದು ಎಂದು ಸ್ಪೀಕರ್ ಅನುಪಸ್ಥಿತಿಯಲ್ಲಿ ಸ್ಪೀಕರ್ ಕಾರ್ಯದರ್ಶಿಗೆ ದೂರು ನೀಡಿದೆ.

ರಾಜೀನಾಮೆ ಕೊಡದೆ ಇರುವವರಲ್ಲಿ ಯಾರ್ಯಾರು ಗೈರಾಗಬಹುದು ಎಂಬ ಕುತೂಹಲವು ಇದೆ. ಇದರ ಮಧ್ಯದಲ್ಲಿ ಶಾಸಕರನ್ನ ಹಿಡಿದಿಟ್ಟುಕೊಳ್ಳುವುದು ಅನಿವಾರ್ಯವಾದರೆ ಕಾಂಗ್ರೆಸ್ ಶಾಸಕರನ್ನ ರೆಸಾರ್ಟ್ ಗೆ ಶಿಫ್ಟ್ ಮಾಡುವ ಬಗ್ಗೆಯೂ ಸಭೆಯಲ್ಲಿ ತೀರ್ಮಾನ ಮಾಡಲಿದ್ದಾರೆ.

ಕೊನೆ ಕ್ಷಣದ ಕಾನೂನು ಆಟ
ಕೊನೆ ಗಳಿಗೆಯಲ್ಲಿ ಕಾಂಗ್ರೆಸ್ ನಾಯಕರಿಂದ ಕಾನೂನು ಆಟ ಶುರುವಾಗಿದೆ. ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಸ್ಪೀಕರ್ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದಾರೆ. ಪಕ್ಷಾಂತರ ನಿಷೇಧ ಕಾಯ್ದೆಯಡಿ ಮತ್ತು ತಮಿಳುನಾಡು ಪ್ರಕರಣದ ಆಧರಿಸಿ ಕ್ರಮ ಕೈಗೊಳ್ಳಿ ಎಂದು ತಿಳಿಸಿದ್ದಾರೆ. ಮೊದಲಿಗೆ ಕೆಪಿಸಿಸಿ ಮೂಲಕ ಎಲ್ಲಾ ಅತೃಪ್ತ ಶಾಸಕರಿಗೆ ಮಾಹಿತಿ ರವಾನಿಸಲಾಗಿದೆ. ಆದರೂ ಇಂದಿನ ಸಿಎಲ್‍ಪಿ ಸಭೆಗೆ ಗೈರಾಗದೇ ಇರಲಿ ಎಂದು ಮುನ್ನೆಚ್ಚರಿಕೆಯಾಗಿ ಸಿದ್ದರಾಮಯ್ಯ ದೂರು ನೀಡಲು ಪ್ಲಾನ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Comments

Leave a Reply

Your email address will not be published. Required fields are marked *