ತನಿಖೆ ವಿಳಂಬವಾಗಿದ್ದಕ್ಕೆ ಠಾಣೆಯಲ್ಲೇ ರೇಪ್ ಸಂತ್ರಸ್ತೆ ಆತ್ಮಹತ್ಯೆಗೆ ಯತ್ನ!

ಮಥುರಾ: ತನ್ನ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆ ವಿಳಂಬವಾಗುತ್ತಿರುವುದಕ್ಕೆ ಮನನೊಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಮಥುರಾ ಜಿಲ್ಲೆಯ ಕೋಸಿ ಕಲಾನ್ ಎಂಬಲ್ಲಿ ನಡೆದಿದೆ.

ಅತ್ಯಾಚಾರಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಲ್ಲದೇ, ಪ್ರಕರಣದ ತನಿಖೆಯನ್ನು ಕೂಡ ನಿಧಾನ ಗತಿಯಲ್ಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆ ಠಾಣೆಯಲ್ಲೇ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ್ದಾರೆ.

ಏನಿದು ಘಟನೆ?: ಒಂದು ತಿಂಗಳ ಹಿಂದೆ 19 ವರ್ಷದ ಯುವಕ ಸೇರಿದಂತೆ ಇಬ್ಬರು ನನ್ನ ಮೇಲೆ ಅತ್ಯಾಚಾರ ನಡೆಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದ್ರೆ ಪೊಲೀಸರು ಮಾತ್ರ ತನಿಖೆ ವಿಳಂಬ ಮಾಡಿದ್ದು, ಈ ಮಧ್ಯೆ ಓರ್ವ ಆರೋಪಿ ಕೇಸ್ ಹಿಂಪಡೆಯುವಂತೆ ಒತ್ತಡ ಹಾಕುತ್ತಿದ್ದ ಎಂದು ಮಹಿಳೆ ಹೇಳಿದ್ದಾರೆ.

ಆದ್ರೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆಂದು ಕೋಸಿ ಕಲಾನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಉದಯ್‍ವೀರ್ ಸಿಂಗ್ ಮಲಿಕ್ ಹೇಳಿದ್ದಾರೆ.

ಇದರಿಂದಾಗಿ ಮಹಿಳೆ ನೇರವಾಗಿ ನಗರದ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಎದುರೇ ಸೀಮೆ ಎಣ್ಣೆ ಸುರಿದುಕೊಂಡಿದ್ದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಘಟನೆ ನಡೆಯದಂತೆ ಮಹಿಳೆಯನ್ನು ತಡೆದಿದ್ದಾರೆ.

ಮಹಿಳೆಯ ಆರೋಪದ ಮೇಲೆ ನಮಗೆ ಅನುಮಾನವಿತ್ತು. ಆದರೂ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *