ಟಿಕ್‍ಟಾಕ್‍ನಲ್ಲಿ ಪರಿಚಯ ಮಾಡ್ಕೊಂಡು ವಂಚನೆ- ಆಂಟಿಯ ಬಂಧನ, ಬಿಡುಗಡೆ

ಬೆಂಗಳೂರು: ಟಿಕ್ ಟಾಕ್ ಮೂಲಕ ಯುವಕರನ್ನು ಪರಿಚಯ ಮಾಡಿಕೊಂಡು ವಂಚಿಸುತ್ತಿದ್ದ ಮಹಿಳೆಯನ್ನು ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ

ವಿಜಯ ಲಕ್ಷ್ಮಿ ಅಲಿಯಾಸ್ ಲಯನ್ ಲಕ್ಷ್ಮಿ ಬಂಧಿತ ಮಹಿಳೆ. ಈಕೆ ದೊಮ್ಮಲೂರು ನಿವಾಸಿ ಶಿವಕುಮಾರ್ ಗೆ ವಂಚಿಸಿದ್ದಳು. ಸದ್ಯ ಪೊಲೀಸರು ಆಕೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ವಿಜಯಲಕ್ಷ್ಮಿ ಟಿಕ್ ಟಾಕ್ ಮೂಲಕ ಶಿವಕುಮಾರ್ ನನ್ನು ಪರಿಚಯ ಮಾಡಿಕೊಂಡು ಮದುವೆ ಆಗೋದಾಗಿ ನಂಬಿಸಿದ್ದಾಳೆ. ಅಲ್ಲದೆ ಹಣ ಪಡೆದು ವಂಚಿಸಿದ್ದಾಳೆ. ಈ ಸಂಬಂಧ ಶಿವಕುಮಾರ್ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಜಯ ಲಕ್ಷ್ಮಿಯನ್ನು ಬಂಧಿಸಿ, ನಂತ ಬಿಡುಗಡೆ ಮಾಡಿದ್ದಾರೆ.

ನಡೆದಿದ್ದೇನು?:
ಶಿವಕುಮಾರ್ ಟಿಕ್ ಟಾಕ್‍ನಲ್ಲಿ ವಿಜಯಲಕ್ಷ್ಮಿಯ ಅನೇಕ ವಿಡಿಯೋಗಳಿಗೆ ಲೈಕ್ ಮಾಡಿದ್ದ. ಅಷ್ಟೇ ಅಲ್ಲದೆ ಫೇಸ್‍ಬುಕ್ ನಲ್ಲಿ ಇಬ್ಬರು ಫ್ರೆಂಡ್ ಆಗಿದ್ದರು. ಈ ಮೂಲಕ ಪರಸ್ಪರ ಪರಿಚಯ ಮಾಡಿಕೊಂಡಿದ್ದರು. ಕೆಲ ದಿನಗಳ ಬಳಿಕ ಶಿವಕುಮಾರ್ ಮೊಬೈಲ್ ನಂಬರ್ ಪಡೆದ ವಿಜಯಲಕ್ಷ್ಮಿ ಚಾಟಿಂಗ್ ಮಾಡಲು ಆರಂಭಿಸಿದ್ದಳು. ಸ್ನೇಹ, ಪ್ರೀತಿಗೆ ತಿರುಗಿ ಶಿವಕುಮಾರ್ ಹಾಗೂ ವಿಜಯಲಕ್ಷ್ಮಿ ಪರಸ್ಪರ ಒಪ್ಪಿ ಒಂದೇ ಮನೆಯಲ್ಲಿ ವಾಸವಿದ್ದರು.

ನಿನ್ನನ್ನು ಮದುವೆಯಾಗುತ್ತೇನೆ ಎಂದು ವಿಜಯಲಕ್ಷ್ಮಿ ಶಿವಕುಮಾರ್ ನನ್ನು ನಂಬಿಸಿದ್ದಳು. ಜೊತೆಗೆ ಆತನಿಂದ ಶಾಪಿಂಗ್, ಬಾಡಿಗೆ ಸೇರಿದಂತೆ ಇತರೆ ಖರ್ಚಿಗೆ ಅಂತ 4 ಲಕ್ಷ ರೂ. ಪಡೆದಿದ್ದಳು. ಹೀಗಾಗಿ ಶಿವಕುಮಾರ್ ಮದುವೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಂತೆ ವಿಜಯಲಕ್ಷ್ಮಿ ಮದುವೆಗೆ ನಿರಾಕರಿಸಿ, ಆತನ ಸಹವಾಸ ಬಿಟ್ಟಿದ್ದಳು. ಇದಾದ ಬಳಿಕವೂ ವಿಜಯಲಕ್ಷ್ಮಿಯು ಶಿವಕುಮಾರ್ ಗೆ ಕರೆ ಮಾಡಿ, ಹಣ ನೀಡುವಂತೆ ಒತ್ತಾಯಿಸಿದ್ದಳು. ಆ ಬಳಿಕ ಕೆಲವು ದಿನಗಳಿಂದ ವಿಜಯಲಕ್ಷ್ಮಿಗೆ ಹಣ ನೀಡುವುದನ್ನು ನಿಲ್ಲಿಸಿದ್ದ. ಇದರಿಂದಾಗಿ ಆರೋಪಿಯು ತನ್ನ ಸ್ನೇಹಿತ ಮಧು ಕೊಲ್ಯಾನ್‍ನಿಂದ ಕರೆ ಮಾಡಿಸಿ ಕೊಲೆ ಬೆದರಿಕೆ ಹಾಕಿಸಿದ್ದಳು. ಈ ಎಲ್ಲ ಬೆಳವಣಿಗೆಯಿಂದ ಬೇಸತ್ತ ಶಿವಕುಮಾರ್ ದೇವರ ಜೀವನ ಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದನು.

Comments

Leave a Reply

Your email address will not be published. Required fields are marked *