ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್?: ರೇವಣ್ಣ, ದೇವೇಗೌಡ ಹೀಗಂದ್ರು

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣಗೆ ಟಿಕೆಟ್ ನೀಡೋ ವಿಚಾರವಾಗಿ ಹೆಚ್‍ಡಿ ದೇವೇಗೌಡ ಹಾಗೂ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ರೇವಣ್ಣ, ನಾವೇನು ನಾಮನಿರ್ದೇಶನ ಮಾಡಿ, ಹಿಂಬಾಗಿಲ ರಾಜಕಾರಣಕ್ಕೆ ಪ್ರವೇಶ ಬಯಸಿಲ್ಲ. ಪ್ರಜ್ವಲ್ ಜೆಡಿಎಸ್ ಕಾರ್ಯಕರ್ತ. ಕ್ಷೇತ್ರದಲ್ಲಿ ದುಡಿತಾ ಇದ್ದಾನೆ, ದುಡಿಯಲಿ. ಪ್ರಜ್ವಲ್‍ಗೆ ದೇವೇಗೌಡ, ಕುಮಾರಸ್ವಾಮಿ ಅವರ ತೀರ್ಮಾನವೇ ಅಂತಿಮ. ಟಿಕೆಟ್ ಕೊಡ್ಬೇಕಾ, ಬೇಡ್ವಾ ಅಂತಾ ಕೋರ್ ಕಮಿಟಿ ತೀರ್ಮಾನ ಮಾಡುತ್ತೆ ಅಂತ ಹೇಳಿದ್ರು.

ಇನ್ನು ಮಾಜಿ ಪ್ರಧಾನಿ ಹಾಗೂ ಪಕ್ಷದ ಹಿರಿಯ ಮುಖಂಡರಾದ ದೇವೇಗೌಡ ಮಾತನಾಡಿ, ಕುಟುಂಬದಲ್ಲಿ ಎಷ್ಟು ಜನ ಚುನಾವಣೆಗೆ ನಿಲ್ತಾರೆ ಅನ್ನೋದೆ ದೊಡ್ಡ ಚರ್ಚೆ ಆಗಿದೆ. ಅದನ್ನ ಮನೆಯ ಯಜಮಾನನಾಗಿ ತೀರ್ಮಾನ ಮಾಡೋನು ನಾನು. ಈ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಬೇಕಿಲ್ಲ ಅಂದ್ರು.

ರೇವಣ್ಣ ತಂದೆ ವಿರುದ್ಧ ಹೋಗಲ್ಲ. ಕುಮಾರಸ್ವಾಮಿ ನನ್ನ ಮಾತು ಮೀರಲ್ಲ. ರೇವಣ್ಣ ಕುಮಾರಸ್ವಾಮಿ ವಿರುದ್ಧ ಹೋಗ್ತಿದ್ದಾರೆ ಅನ್ನೋದು ಸುಳ್ಳು. ಕುಟುಂಬದ ಯಜಮಾನನಾಗಿ ಅಂತಿಮವಾಗಿ ತೀರ್ಮಾನ ಮಾಡುವುದು ನಾನೇ. ಕಾಂಗ್ರೆಸ್-ಬಿಜೆಪಿ ಜೊತೆ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳಲ್ಲ. ರಾಜ್ಯ ಅಭಿವೃದ್ಧಿಯಾಗಬೇಕಾದ್ರೆ ಜೆಡಿಎಸ್‍ಗೆ ಪೂರ್ಣ ಬಹುಮತ ನೀಡಬೇಕು ಅಂತ ಹೇಳಿದ್ರು.

Comments

Leave a Reply

Your email address will not be published. Required fields are marked *