ಕಡಿಯದೇ ಕ್ರೇನ್‌ನಿಂದ ಮರಗಳ ಸ್ಥಳಾಂತರ – ಪರಿಸರ ಉಳಿಸಿದ ಕೃಷಿ ವಿವಿ

ಶಿವಮೊಗ್ಗ: ವಿಶೇಷ ಯಂತ್ರಗಳನ್ನು ಬಳಸಿ ಮರಗಳನ್ನು ಒಂದೆಡೆಯಿಂದ ಬೇರೆಡೆಗೆ ಸ್ಥಳಾಂತರಿಸುವ ದೃಶ್ಯಗಳನ್ನು ನೋಡಿರುತ್ತೀರ. ಆದರೆ ಕ್ರೇನ್, ಜೆಸಿಬಿ ಮೂಲಕ ಕೂಡ ಮರಗಳನ್ನು ಸ್ಥಳಾಂತರ ಮಾಡಬಹುದು ಎಂದು ಶಿವಮೊಗ್ಗದ ಕೃಷಿ ವಿವಿ ತೋರಿಸಿಕೊಟ್ಟಿದೆ.

ಹೌದು ಜಿಲ್ಲೆಯ ಸಾಗರ ತಾಲೂಕು ಆನಂದಪುರ ಸಮೀಪದ ಇರುವಕ್ಕಿ ಗ್ರಾಮದಲ್ಲಿರುವ ಕೃಷಿ ವಿವಿ ಆವರಣದಲ್ಲಿರುವ ಬೀಟೆ ಮರಗಳನ್ನು ಇದೇ ಮಾದರಿಯಲ್ಲಿ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ವಿದೇಶಗಳಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಮರಗಳ ಮಾರಣ ಹೋಮ ಮಾಡದೇ, ದೊಡ್ಡ ದೊಡ್ಡ ಮರಗಳನ್ನೇ ವಿಶೇಷ ಯಂತ್ರಗಳನ್ನು ಬಳಸಿ ಬೇರೆಡೆಗೆ ಸ್ಥಳಾಂತರಿಸುವ ದೃಶ್ಯಗಳನ್ನ ಆಗಾಗ ವಿಡಿಯೋಗಳಲ್ಲಿ ನೋಡಿದ್ದೀವಿ. ಇದಕ್ಕಾಗಿಯೇ ವಿಶೇಷ ಯಂತ್ರಗಳನ್ನು ಅಲ್ಲಿ ಅಲ್ಲಿ ಬಳಸಲಾಗುತ್ತದೆ. ಆದರೆ ಮಲೆನಾಡಿನಲ್ಲಿ ಅಂತಹ ಯಂತ್ರಗಳು ಇಲ್ಲದೆಯೂ, ಮರಗಳನ್ನು ಶಿಫ್ಟ್ ಮಾಡಬಹುದು ಎಂದು ತೋರಿಸಿಕೊಡಲಾಗಿದೆ.

ಅರಣ್ಯ ಇಲಾಖೆ ಅನುಮತಿ ಪಡೆದು ವಿವಿ ಆವರಣದಲ್ಲಿರುವ ಬೀಟೆ ಮರಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಇದಕ್ಕೆ ವಿಶೇಷ ಯಂತ್ರವೇನು ಬಳಸಲಾಗಿಲ್ಲ. ಬದಲಾಗಿ ಕ್ರೇನ್ ಮತ್ತು ಜೆಸಿಬಿ ಮೂಲಕ ಇದ್ದ ಮರಗಳನ್ನ ಹಾಗೆಯೇ ಕಿತ್ತು ಬೇರೆಡೆಗೆ ನೆಡಲಾಗಿದೆ.

ಕೃಷಿ ವಿವಿಗಾಗಿ ಜಾಗದ ಅವಶ್ಯಕತೆ ಈ ಬೀಟೆ ಮರಗಳನ್ನು ಕಟಾವು ಮಾಡಲೇ ಬೇಕಿತ್ತು. ಸುಮಾರು 50 ಮರಗಳ ಕಟಾವು ಮಾಡಬೇಕಾಗಿತ್ತು. ಇವೆಲ್ಲವೂ ಇದೀಗ ಕಟಾವಿನ ಬದಲಾಗಿ ಪರಿಸರ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬೆರೆಡೆಗೆ ಮರಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಈ ಮೂಲಕ ಶಿವಮೊಗ್ಗ ಕೃಷಿ ವಿವಿ ಕಟ್ಟಡ ನಿರ್ಮಾಣಕ್ಕಾಗಿ ಮರಗಳನ್ನು ಉರುಳಿಸುವ ಬದಲಾಗಿ ಅವುಗಳನ್ನು ಉಳಿಸಿ ಬದಲಾವಣೆ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.

Comments

Leave a Reply

Your email address will not be published. Required fields are marked *