ಸೆಲ್ಫಿ ಕ್ರೇಜ್‍ಗೆ ಕೆರೆಯಲ್ಲಿ ಮುಳುಗಿ ಮೂವರು ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಬಲಿ!

ಬೆಂಗಳೂರು: ಸೆಲ್ಫಿ ಹುಚ್ಚಿಗೆ ಕೆರೆಯಲ್ಲಿ ಮುಳುಗಿ ಮೂವರು ವಿದ್ಯಾರ್ಥಿಗಳು ಬಲಿಯಾಗಿರುವಂತ ದಾರುಣ ಘಟನೆ ಸಂಭವಿಸಿದೆ.

ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಹಳೇ ನಿಜಗಲ್ ಗ್ರಾಮದ ಕರೆಯಲ್ಲಿ ಈ ಘಟನೆ ನಡೆದಿದೆ. ಎನ್‍ಎಸ್‍ಎಸ್ ಕ್ಯಾಂಪಿಗೆ ಬಂದಿದ್ದ ವಿದ್ಯಾರ್ಥಿಗಳಾದ ಪೂರ್ಣಚಂದ್ರ (17), ಮೊಹಮ್ಮದ್ ಮೂರ್ತಜ್ (16) ಮತ್ತು ಶಶಾಂಕ್ (17) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಪೂರ್ಣಚಂದ್ರ ಹಾಗೂ ಮೊಹಮ್ಮದ್ ಮೂರ್ತಜ್ ತುಮಕೂರಿನ ಸಿದ್ದಗಂಗಾ ಬಾಲಕರ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಮತ್ತೋರ್ವ ವಿದ್ಯಾರ್ಥಿ ಶಶಾಂಕ್ ತುರುವೇಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ಎನ್ನಲಾಗಿದೆ.

ಎನ್‍ಎಸ್‍ಎಸ್ ಕ್ಯಾಂಪಿಗೆ ಬಂದಿದ್ದ ಸುಮಾರು 7-8 ವಿದ್ಯಾರ್ಥಿಗಳು ಮೋಜು-ಮಸ್ತಿಗಾಗಿ ಕೆರೆಯಲ್ಲಿ ಈಜಾಡಲು ಹೋಗಿದ್ದಾರೆ. ಈ ವೇಳೆ ಸೆಲ್ಫಿ ತೆಗೆದುಕೊಳ್ಳುವ ಕ್ರೇಜಿನಿಂದ ದಡಕ್ಕೆ ಬಂದು ಫೋಟೋ ಕ್ಲಿಕ್ಕಿಸುವುದು, ಮತ್ತೆ ಹೋಗುವುದು ಈ ರೀತಿ ಮಾಡುತ್ತಿದ್ದರು. ಈ ವೇಳೆ ಕೆರೆಯಲ್ಲಿನ ಗುಂಡಿಗೆ ಸಿಲುಕಿ ಈ ಮೂವರು ವಿದ್ಯಾರ್ಥಿಗಳು ಮುಳುಗಿ ಮೃತಪಟ್ಟಿದ್ದಾರೆ. ಇನ್ನುಳಿದ ವಿದ್ಯಾರ್ಥಿಗಳು ಭಯದಿಂದ ಓಡಿಹೋಗಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳಿಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸಳಕ್ಕೆ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ಬಂದು ವಿದ್ಯಾರ್ಥಿಗಳ ಶವಕ್ಕಾಗಿ ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ. ಈ ಘಟನೆ ಸಂಬಂಧ ಡಾಬಸ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *